ಡೆಹ್ರಾಡೂನ್: ಯೋಗ ಗುರು ಬಾಬಾ ರಾಮದೇವ್ ಅವರ ದಿವ್ಯ ಫಾರ್ಮಸಿಗೆ ಸೇರಿದ ಐದು ಔಷಧಗಳ ಉತ್ಪಾದನೆಯ ಮೇಲೆ ಹೇರಿದ್ದ ನಿರ್ಬಂಧವನ್ನು ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಪರವಾನಗಿ ಪ್ರಾಧಿಕಾರವು ವಾಪಸ್ ಪಡೆದುಕೊಂಡಿದೆ.
ಮಧುಮೇಹ, ರಕ್ತದೊತ್ತಡ, ಗಳಗಂಡ, ಗ್ಲಾಕೋಮಾ ಮತ್ತು ಅಧಿಕ ಕೊಲೆಸ್ಟರಾಲ್ಗಿರುವ ಔಷಧಗಳ ಉತ್ಪಾದನೆಯನ್ನು ಮುಂದುವರಿಸಬಹುದು ಎಂದೂ ಪ್ರಾಧಿಕಾರವು ಹೊಸ ಆದೇಶದಲ್ಲಿ ಹೇಳಿದೆ.
ಈ ಔಷಧಗಳ ಉತ್ಪಾದನೆಗೆ ನಿರ್ಬಂಧ ಹೇರಿ ನವೆಂಬರ್ 9ರಂದು ಹೊರಡಿಸಿದ್ದ ಆದೇಶದಲ್ಲಿ ದೋಷಗಳು ಕಂಡುಬಂದಿವೆ ಮತ್ತು ಅದನ್ನು ತರಾತುರಿಯಲ್ಲಿ ಹೊರಡಿಸಲಾಗಿತ್ತು ಎಂದು ರಾಜ್ಯ ಆರೋಗ್ಯ ಪ್ರಾಧಿಕಾರದ ಔಷಧ ನಿಯಂತ್ರಕರು ಸ್ಪಷ್ಟನೆ ನೀಡಿದ್ದಾರೆ.
ಆದೇಶ ಹೊರಡಿಸುವ ಮೊದಲು ಕಂಪನಿಗೆ ತನ್ನ ನಿಲುವನ್ನು ವ್ಯಕ್ತಪಡಿಸಲು ಕಾಲಾವಕಾಶ ನೀಡಬೇಕಾಗಿತ್ತು ಎಂದೂ ಅವರು ಹೇಳಿದ್ದಾರೆ.
ತಪ್ಪನ್ನು ತಿದ್ದಿಕೊಂಡಿರುವುದಕ್ಕೆ ರಾಮದೇವ್ ಅವರ ಆಪ್ತರಾದ ಆಚಾರ್ಯ ಬಾಲಕೃಷ್ಣ ಅವರು ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.