ನವದೆಹಲಿ: ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದು ಎಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮಂಗಳವಾರ ಹೇಳಿದರು.
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಅವರನ್ನು ರಾಷ್ಟ್ರಪತಿ ಭವನದ ಮುಂಭಾಗ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದರು.
ರಾಷ್ಟ್ರಪತಿ ಭವನದಲ್ಲಿ ವರದಿಗಾರರ ಜತೆ ಮಾತನಾಡಿದ ಹಸೀನಾ, ಉಭಯ ದೇಶಗಳ ಜನರ ಜೀವನ ಮಟ್ಟ ಸುಧಾರಣೆ, ಬಡತನ ನಿರ್ಮೂಲನೆ ಮತ್ತು ಆರ್ಥಿಕ ಅಭಿವೃದ್ಧಿ ಕುರಿತು ಮೋದಿ ಜತೆ ಚರ್ಚಿಸುವುದಾಗಿ ತಿಳಿಸಿದರು.
‘ನಮ್ಮ ಪ್ರಮುಖ ಗುರಿ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿ ಜನರ ಮೂಲಭೂತ ಅಗತ್ಯಗಳನ್ನು ಪೂರೈಸುವುದಾಗಿದೆ. ಸ್ನೇಹದಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಹೀಗಾಗಿ ನಾವು ಯಾವತ್ತೂ ಈ ವಿಚಾರಕ್ಕೆ ಆದ್ಯತೆ ನೀಡುತ್ತೇವೆ’ ಎಂದು ಹಸೀನಾ ಹೇಳಿದರು.
‘ಬಾಂಗ್ಲಾ ವಿಮೋಚನಾ ಯುದ್ಧದ ಸಮಯದಲ್ಲಿ ಭಾರತ ನೀಡಿದ ಕೊಡುಗೆಯನ್ನು ಬಾಂಗ್ಲಾದೇಶವು ಯಾವಾಗಲೂ ಸ್ಮರಿಸುತ್ತದೆ’ ಎಂದು ಅವರು ನೆನಪಿಸಿಕೊಂಡರು.