ಬೆಂಗಳೂರು: ಬಿಬಿಎಂಪಿ ವಾರ್ಡ್ಗಳ ಸಂಖ್ಯೆಯನ್ನು 198 ರಿಂದ 225 ಕ್ಕೆ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಲವು ವ್ಯಕ್ತವಾಗಿದ್ದು, ವಾರ್ಡ್ಗಳ ಪುನರ್ ವಿಂಗಡಣೆಗಾಗಿ ಚುನಾವಣೆ ಮುಂದೂಡಲು ಚುನಾವಣಾ ಆಯೋಗಕ್ಕೆ ಮನವಿ ಮಾಡಲು ನಿರ್ಧರಿಸಲಾಗಿದೆ.
ಸುಮಾರು 40 ಸಾವಿರದಿಂದ 47 ಸಾವಿರ ಜನಸಂಖ್ಯೆಗೆ ಒಂದು ವಾರ್ಡ್ ಇದ್ದರೆ ಸೂಕ್ತ. ಜತೆಗೆ ಬಿಬಿಎಂಪಿ ವಲಯಗಳನ್ನು 8 ರಿಂದ 15 ಕ್ಕೆ ಹೆಚ್ಚಿಸುವ ಕುರಿತೂ ಚರ್ಚೆ ನಡೆಯಿತುಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಜನಸಂಖ್ಯೆ ಆಧಾರದ ಮೇಲೆ ವಾರ್ಡ್ಗಳ ವಿಂಗಡಣೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಕುರಿತಂತೆ ಶುಕ್ರವಾರ ನಡೆಯುವ ವಿಧಾನಮಂಡಲದ ಜಂಟಿ ಸಲಹಾ ಸಮಿತಿಯಲ್ಲಿ ವಿಸ್ತೃತವಾಗಿ ಚರ್ಚಿಸಲು ನಿರ್ಧರಿಸಲಾಯಿತು. ಈಗಿರುವ ವಾರ್ಡ್ಗಳ ಪ್ರಕಾರವೇ ಚುನಾವಣೆ ನಡೆಸಬೇಕಾ ಅಥವಾ ವಾರ್ಡ್ ಪುನರ್ ವಿಂಗಡಣೆ ಬಳಿಕ ಚುನಾವಣೆಗೆ ಹೋಗಬೇಕಾ ಎಂಬುದನ್ನು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದರು.
ವಾರ್ಡ್ ವಿಂಗಡಣೆ ವಿಚಾರ ನ್ಯಾಯಾಲಯದಲ್ಲಿ ಇದೆ. ಚುನಾವಣೆ ಬಗ್ಗೆ ನ್ಯಾಯಾಲಯಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ವಾರ್ಡ್ ವಿಂಗಡಣೆ ಬಳಿಕವೇ ಚುನಾವಣೆಗೆ ಹೋಗಬೇಕು ಎಂಬ ಅಭಿಪ್ರಾಯ ಕೇಳಿ ಬಂದಿದೆ. ಬಿಬಿಎಂಪಿಗೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ ಚರ್ಚೆ ನಡೆಯಲಿಲ್ಲ ಎಂದು ಹೇಳಿದರು.