ಕೋಲ್ಕತ್ತ: ಪಶ್ಚಿಮ ಬಂಗಾಳದ ಮಾನವ ಹಕ್ಕುಗಳ ಆಯೋಗದ (ಎಸ್ಎಚ್ಆರ್ಸಿ) ಅಧ್ಯಕ್ಷರ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ಸರ್ಕಾರದ ದ್ವಂದ್ವ ನಿಲುವಿನ ಬಗ್ಗೆ ಅಲ್ಲಿನ ರಾಜ್ಯಪಾಲ ಜಗದೀಪ್ ಧನಕರ್ ಭಾನುವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಎಸ್ಎಚ್ಆರ್ಸಿ ಅಧ್ಯಕ್ಷರ ನೇಮಕಕ್ಕೆ ಕಾಲಮಿತಿಯೊಳಗೆ ಶಿಪಾರಸು ಮಾಡುವಂತೆ ಅವರು ಸರ್ಕಾರಕ್ಕೆಸೂಚನೆ ನೀಡಿದ್ದಾರೆ.
ಎಸ್ಎಚ್ಆರ್ಸಿ ಅಧ್ಯಕ್ಷರ ನೇಮಕ ವಿಷಯದಲ್ಲಿ ಮಮತಾ ಬ್ಯಾನರ್ಜಿ ಅವರ ನಿಲುವನ್ನು ಪ್ರಶ್ನಿಸಿ ಟ್ವೀಟ್ ಮಾಡಿರುವ ರಾಜ್ಯಪಾಲರು, ರಾಜ್ಯದಲ್ಲಿ ಆಡಳಿತಗಾರನ ಕಾನೂನು ಇದೆಯೇ ಹೊರತು ನೆಲದ ಕಾನೂನು (ರೂಲ್ ಆಫ್ ಲಾ) ಇಲ್ಲ. ಇದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗಮನಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಸತ್ಯಶೋಧನಾ ಸಮಿತಿ ರಚಿಸಿತ್ತು. ಪಶ್ಚಿಮ ಬಂಗಾಳದಲ್ಲಿ ‘ರೂಲ್ ಆಫ್ ಲಾ’ ಬದಲಿಗೆ ಆಡಳಿತಗಾರನ ಕಾನೂನು ಇದೆ ಎಂದು ಸಮಿತಿ ಜುಲೈನಲ್ಲಿ ಹೇಳಿತ್ತು.
ಕೋಲ್ಕತ್ತ ಹೈಕೋರ್ಟ್ ಆದೇಶದ ಮೇರೆಗೆ ಎನ್ಎಚ್ಆರ್ಸಿ ಐವರು ನ್ಯಾಯಾಧೀಶರ ಸಮಿತಿಯನ್ನು ರಚಿಸಿದೆ. ಪಶ್ಚಿಮ ಬಂಗಾಳದ ಎಸ್ಎಚ್ಆರ್ಸಿಯ ಸದಸ್ಯರಾಗಿರುವ ನಿವೃತ್ತ ಐಪಿಎಸ್ ಅಧಿಕಾರಿ ನಪರಾಜಿತ್ ಮುಖರ್ಜಿ ಅವರನ್ನು ರಾಜ್ಯದ ಎಸ್ಎಚ್ಆರ್ಸಿ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ರಾಜ್ಯ ಸರ್ಕಾರ ಕೋರಿದೆ.