ಲಖನೌ: ‘ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು‘ – ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆಯಲ್ಲಿ ಭಾಗವಹಿಸುವಿರೇ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದು ಹೀಗೆ.
ಭಾರತ್ ಜೋಡೊ ಯಾತ್ರೆಗೆ ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಹಾಗೂ ಬಿಎಸ್ಪಿಮುಖ್ಯಸ್ಥೆ ಮಾಯಾವತಿ ಅವರಿಗೆ ಅಹ್ವಾನ ನೀಡಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿದ, ಕೆಲದಿನಗಳ ಬಳಿಕ ಅಖಿಲೇಶ್ ಅವರಿಂದ ಈ ಮಾತು ಹೊರಬಿದ್ದಿದೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನಗೆ ನೀಡಿದ ಆಹ್ವಾನ ಪತ್ರಿಕೆ ನಿಮ್ಮ ಮೊಬೈಲ್ ಫೋನ್ನಲ್ಲಿ ಇದ್ದರೆ ದಯಮಾಡಿ ಕಳಿಸಿಕೊಡಿ. ನಮ್ಮ ಭಾವನೆಗಳು ಭಾರತ್ ಜೋಡೊ ಯಾತ್ರೆಯ ಜತೆಗಿವೆ. ನನಗೆ ಯಾವುದೇ ಆಹ್ವಾನ ಬಂದಿಲ್ಲ‘ ಎಂದು ಅವರು ನುಡಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಸದ್ಯ ಬಿಡುವು ಪಡೆದುಕೊಂಡಿದ್ದು, ಜನವರಿ 3 ರಿಂದ ಪುನಾರಂಭಗೊಳ್ಳಲಿದೆ. ಉತ್ತರ ಪ್ರದೇಶ, ಪಂಜಾಬ್ ದಾಟಿ ಜಮ್ಮು ಕಾಶ್ಮೀರಕ್ಕೆ ತಲುಪಲಿದೆ.