ನವದೆಹಲಿ: ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸಂಚರಿಸಲಿರುವ ‘ಭಾರತ್ ಜೋಡೊ ಯಾತ್ರೆ’ ಕಾಂಗ್ರೆಸ್ಗೆ ಸಂಜೀವಿನಿ ಆಗಲಿದೆ ಎಂದು ಪಕ್ಷದ ಪ್ರಮುಖ ನಾಯಕ ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಕನ್ಯಾಕುಮಾರಿಯಲ್ಲಿ ಬುಧವಾರ ಆರಂಭವಾಗಿರುವ ಯಾತ್ರೆಯ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೊ ಯಾತ್ರೆಯು ಪಕ್ಷಕ್ಕೆ ‘ಜೀವ ರಕ್ಷಕ’ವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.
ಈ ಯಾತ್ರೆ ಮೂಲಕ ದೇಶದಾದ್ಯಂತ ತಳಮಟ್ಟದ ಪ್ರಚಾರ ನಡೆಯಲಿದೆ. ಇದನ್ನು ರಾಜಕೀಯ ವಿರೋಧಿಗಳು ಲಘುವಾಗಿ ತೆಗೆದುಕೊಳ್ಳಲಾರರು ಎಂದು ಹೇಳಿದ್ದಾರೆ.
137 ವರ್ಷಗಳಲ್ಲಿ ಕಾಂಗ್ರೆಸ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದು, ಈಗ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದೆ ಎಂದು ರಮೇಶ್ ನುಡಿದಿದ್ದಾರೆ.
‘ಕಾಂಗ್ರೆಸ್ ಪಕ್ಷವು ಹೆಚ್ಚು ಆಕ್ರಮಣಕಾರಿಯಾಗಿ ಹೊರಹೊಮ್ಮಲಿದೆ. ಹೆಚ್ಚು ಸಕ್ರಿಯವಾಗಲಿದೆ. ಬೀದಿಯಲ್ಲಿ ನಿಂತು ಹೋರಾಡುವ ಪಕ್ಷವಾಗಿ ನಿಮ್ಮ ಮುಂದೆ ಗೋಚರವಾಗಲಿದೆ’ ಎಂದು ತಿಳಿಸಿದ್ದಾರೆ.
ನಾವೀಗ ಅಧಿಕಾರದಲ್ಲಿ ಇಲ್ಲದಿರಬಹುದು. ಆದರೆ, ಪ್ರತಿ ಮೊಹಲ್ಲಾ, ಹಳ್ಳಿ, ಪಟ್ಟಣಗಳಲ್ಲಿ ಖಂಡಿತವಾಗಿಯೂ ಅಸ್ತಿತ್ವವನ್ನು ಹೊಂದಿದ್ದೇವೆ. ಇದು ತುಂಬಾ ಸ್ಪಷ್ಟವಾಗಿದೆ ಎಂದು ರಮೇಶ್ ಹೇಳಿದ್ದಾರೆ.
ಕನ್ಯಾಕುಮಾರಿಯಲ್ಲಿ ಆರಂಭಗೊಂಡು ಕಾಶ್ಮೀರದ ಶ್ರೀನಗರದಲ್ಲಿ ಕೊನೆಗೊಳ್ಳುವ ಯಾತ್ರೆಯು 150 ದಿನಗಳ ಕಾಲ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಂಚರಿಸಲಿದೆ.