ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್‌ ತನಿಖೆಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಒತ್ತಾಯ

Last Updated 2 ಆಗಸ್ಟ್ 2021, 23:57 IST
ಅಕ್ಷರ ಗಾತ್ರ

ನವದೆಹಲಿ:ಪೆಗಾಸಸ್‌ ಕುತಂತ್ರಾಂಶ ಬಳಸಿ ಗೂಢಚರ್ಯೆ ನಡೆಸಿದ್ದಾರೆ ಎನ್ನಲಾದ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಆಡಳಿತಾರೂಢ ಎನ್‌ಡಿಎಯ ಅಂಗವಾಗಿರುವ ಜೆಡಿಯುನ ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ದನಿಗೂಡಿಸಿದ್ದಾರೆ.

‘ದೂರವಾಣಿ ಕದ್ದಾಲಿಕೆಯ ಬಗ್ಗೆ ಬಹಳ ದಿನಗಳಿಂದ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಚರ್ಚೆ (ಸಂಸತ್ತಿನಲ್ಲಿ) ನಡೆಯಲೇಬೇಕು. ಆರಂಭದ ದಿನದಿಂದಲೇ ನಾನು ಇದನ್ನು ಹೇಳುತ್ತಿದ್ದೇನೆ. ಈಗಿನ ದಿನಗಳಲ್ಲಿ ಇಂತಹುದನ್ನು (ಗೂಢಚರ್ಯೆ) ಯಾರು ಬೇಕಿದ್ದರೂ ವಿವಿಧ ರೀತಿಯಲ್ಲಿ ಮಾಡಬಹುದು. ಹಾಗಾಗಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಇಡೀ ಪ್ರಕರಣದ ಎಲ್ಲ ಆಯಾಮಗಳನ್ನೂ ಪರಿಶೀಲನೆಗೆ ಒಳಪಡಿಸಬೇಕು’ ಎಂದು ನಿತೀಶ್‌ ಹೇಳಿದ್ದಾರೆ.

ನಿತೀಶ್ ಹೇಳಿಕೆಯ ಬಗ್ಗೆ ಹಲವಾರು ಪ್ರತಿಕ್ರಿಯೆಗಳು ಬಂದಿವೆ. ಲಾಲು ಪ್ರಸಾದ್‌ ನೇತೃತ್ವದ ಆರ್‌ಜೆಡಿ ಈ ಹೇಳಿಕೆಯನ್ನು ಸ್ವಾಗತಿಸಿದೆ. ನಿತೀಶ್‌ ಅವರು ಈ ಹೇಳಿಕೆಯನ್ನು ಹಿಂದಕ್ಕೆ ಪಡೆಯಲಿಕ್ಕಿಲ್ಲ ಎಂಬ ವಿಶ್ವಾಸವನ್ನು ಪಕ್ಷವು ವ್ಯಕ್ತಪಡಿಸಿದೆ. ‘ಬಿಜೆಪಿಗಿಂತ ಭಿನ್ನವಾದ ಹಲವು ನಿಲುವುಗಳನ್ನು ನಿತೀಶ್‌ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಆಗಬೇಕು ಎಂದು ಅವರು ಹೊಂದಿರುವ ಆಕಾಂಕ್ಷೆಯ ಭಾಗ ಇದು’ ಎಂದು ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಹೇಳಿದ್ದಾರೆ.

ನಿತೀಶ್‌ ಅವರನ್ನು ಲೇವಡಿ ಮಾಡುವುದಕ್ಕೂ ಈ ಸಂದರ್ಭವನ್ನು ಆರ್‌ಜೆಡಿ ಬಳಸಿಕೊಂಡಿದೆ. ನಿತೀಶ್‌ ಅವರು ತಮ್ಮ ನಿಲುವಿಗೆ ಬದ್ಧರಾಗಬೇಕು ಎಂದಿದೆ. ಒತ್ತಡ ಬಂದ ಬಳಿಕ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂಬ ಹೇಳಿಕೆಯನ್ನು ಅವರು ನೀಡಬಾರದು ಎಂದು ಆರ್‌ಜೆಡಿ ಹೇಳಿದೆ.

ಆದರೆ, ನಿತೀಶ್‌ ಅವರ ಹೇಳಿಕೆಯನ್ನು ಜೆಡಿಯು ಮುಖಂಡರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿಯ ನಿಲುವಿಗಿಂತ ಭಿನ್ನವಾದ ನಿಲುವನ್ನು ಜೆಡಿಯು ಹಿಂದೆಯೂ ತೆಗೆದುಕೊಂಡಿದೆ. ಇದು ಬಿಹಾರದ ಎನ್‌ಡಿಎ ಮೈತ್ರಿಕೂಟ ನೇತೃತ್ವದ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT