ಮೋತಿಹಾರಿ, ಬಿಹಾರ: ಮಹಾತ್ಮಗಾಂಧಿ ಅವರು ಚಂಪಾರಣ್ ಸತ್ಯಾಗ್ರಹವನ್ನು ಆರಂಭಿಸಿದ್ದ ನೆನಪಿಗಾಗಿ, ಆ ಸ್ಥಳದಲ್ಲಿ ಸ್ಥಾಪಿಸಿದ್ದ ಗಾಂಧೀಜಿ ಪ್ರತಿಮೆಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಈ ಬೆಳವಣಿಗೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಪೂರ್ವ ಚಂಪಾರಣ್ ಜಿಲ್ಲೆ ಮ್ಯಾಜಿಸ್ಟ್ರೇಟ್ ಶೀರ್ಷತ್ ಕಪಿಲ್ ಅಶೋಕ್ ಅವರು, ‘ಚರಕ ಪಾರ್ಕ್ನಲ್ಲಿದ್ದ ಪ್ರತಿಮೆಯನ್ನು ಜಖಂಗೊಳಿಸಿ, ಕೆಳಗೆ ಬೀಳಿಸಲಾಗಿದೆ. ಕಿಡಿಗೇಡಿಗಳ ಪತ್ತೆಗೆ ಕ್ರಮವಹಿಸಿದ್ದು, ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ತಿಳಿಸಿದ್ದಾರೆ.
ಪ್ರತಿಮೆಗೆ ಹಾನಿ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸ್ಥಳದಲ್ಲಿ ಭಾನುವಾರ ರಾತ್ರಿ ಕೆಲ ಧಾರ್ಮಿಕ ಘೋಷಣೆಗಳು ಕೇಳಿಬಂದವು. ಬಲಪಂಥೀಯ ಗುಂಪುಗಳ ಕೈವಾಡ ಇರಬಹುದು ಎಂಬ ಆರೋಪ ಕೇಳಿ ಬಂದಿದೆ.
ಆದರೆ, ಈ ಬಗ್ಗೆ ಪ್ರತಿಕ್ರಿಯಿಸಲು ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರಾಕರಿಸಿದ್ದಾರೆ. ‘ಗಾಂಧೀಜಿ ಅವರು ಅಹಿಂಸೆಯನ್ನು ಪ್ರತಿಪಾದಿಸುತ್ತಿದ್ದರು. ಇಂಥ ಕೃತ್ಯಗಳ ಮೂಲಕ ಎಂದಿಗೂ ಸತ್ಯವನ್ನು ಹತ್ತಿಕ್ಕಲಾಗದು’ ಎಂದೂ ಪ್ರತಿಪಾದಿಸಿದ್ದಾರೆ.
ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ ಪಾರ್ಕ್ ನಿರ್ವಹಣೆಯನ್ನು ಪವರ್ ಗ್ರಿಡ್ ಕಾರ್ಪೊರೇಷನ್ ಸಂಸ್ಥೆ ವಹಿಸಿಕೊಂಡಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಸೇರಿದಂತೆ ಸುರಕ್ಷತಾ ಕ್ರಮ ವಹಿಸಲು ಸಂಸ್ಥೆಗೆ ಸಲಹೆ ಮಾಡುತ್ತೇವೆ ಎಂದು ಹೇಳಿದರು.
ಬಲವಂತವಾಗಿ ಇಂಡಿಗೋ ಪುಷ್ಪಕೃಷಿ ಕೈಗೊಳ್ಳಲು ಒತ್ತಡ ಹೇರುವುದನ್ನು ವಿರೋಧಿಸಿ ಬ್ರಿಟಿಷ್ ಆಡಳಿತದ ವಿರುದ್ಧ ಮಹಾತ್ಮಗಾಂಧಿ ಅವರು 1917ರಲ್ಲಿ ಈ ಸ್ಥಳದಿಂದ ಸತ್ಯಾಗ್ರಹ ಆಂದೋಲನವನ್ನು ಆರಂಭಿಸಿದ್ದರು.