ಕೋಲ್ಕತಾ: 'ಬಿಜೆಪಿ ಹೊರಗಿನವರ ಪಕ್ಷ. ಅದಕ್ಕೆ ನಮ್ಮ ರಾಜ್ಯದಲ್ಲಿ ಸ್ಥಾನವಿಲ್ಲ,' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಬಂಗಾಳವನ್ನು 'ಗಲಭೆ ಪೀಡಿತ ಗುಜರಾತ್' ಆಗಿ ಪರಿವರ್ತಿಸಲು ಎಂದಿಗೂ ಬಿಡುವುದಿಲ್ಲ ಎಂದೂ ಮಮತಾ ಅವರು ಹೇಳಿದ್ದಾರೆ.
ದೇಶದ ಗಡಿಯಲ್ಲಿನ ಪರಿಸ್ಥಿತಿ ಸರಿ ಇಲ್ಲದಿದ್ದರೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾತ್ರ ಚುನಾವಣೆಯಲ್ಲಿ ನಿರತರಾಗಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ತಮ್ಮ ವೃತ್ತಿಜೀವನದಲ್ಲೇ ಇಂಥ ಗೃಹ ಸಚಿವರನ್ನು ಎಂದಿಗೂ ನೋಡಿಲ್ಲ ಎಂದು ಹೇಳಿದರು.
'ಬಂಗಾಳದಲ್ಲಿ ಹೊರಗಿನವರಿಗೆ ಸ್ಥಾನವಿಲ್ಲ. ಚುನಾವಣೆಯ ಸಮಯದಲ್ಲಿ ಮಾತ್ರ ರಾಜ್ಯಕ್ಕೆ ಬಂದು ಇಲ್ಲಿನ ಶಾಂತಿಯನ್ನು ಭಂಗಗೊಳಿಸಲು ಪ್ರಯತ್ನಿಸುವವರಿಗೆ ಸ್ವಾಗತವಿಲ್ಲ' ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
'ಅವರು (ಬಿಜೆಪಿ) ಪಶ್ಚಿಮ ಬಂಗಾಳವನ್ನು ಗುಜರಾತ್ ಆಗಿ ಪರಿವರ್ತಿಸುವುದಾಗಿ ಹೇಳುತ್ತಿದ್ದಾರೆ. ನಮ್ಮ ಬಂಗಾಳವನ್ನು ಗುಜರಾತ್ ನಂತಹ ಗಲಭೆ ಪೀಡಿತ ರಾಜ್ಯವಾಗಿ ಮಾಡಲು ಅವರು ಏಕೆ ಬಯಸುತ್ತಾರೆ? ನಮಗೆ ಗಲಭೆಗಳು ಬೇಡ' ಎಂದು ಮಮತಾ ಹೇಳಿದರು.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಇತ್ತೀಚೆಗೆ ರಾಜ್ಯವನ್ನು ಐದು ಸಾಂಸ್ಥಿಕ ವಲಯಗಳಾಗಿ ವಿಂಗಡಿಸಿ, ಕೇಂದ್ರ ನಾಯಕರನ್ನು ಅವುಗಳ ಉಸ್ತುವಾರಿಗಳನ್ನಾಗಿ ನೇಮಿಸಿದೆ.