ನವದೆಹಲಿ: ಪಕ್ಷದ ಉತ್ತರಾಖಂಡ ಘಟಕಕ್ಕೆ ಅಧ್ಯಕ್ಷರನ್ನಾಗಿ ಮಹೇಂದ್ರ ಭಟ್ ಅವರನ್ನು ಬಿಜೆಪಿ ಶನಿವಾರ ನೇಮಕ ಮಾಡಿದೆ.
ಈವರೆಗೆ ಹರಿದ್ವಾರದ ಶಾಸಕ ಮಹೇಶ್ ಕೌಶಿಕ್ ಅಧ್ಯಕ್ಷರಾಗಿದ್ದರು. ಈ ವರ್ಷ ಆರಂಭದಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಮಹೇಂದ್ರ ಭಟ್ ಸೋಲನುಭವಿಸಿದ್ದರು.
ಗರ್ವಾಲ್ ಪ್ರದೇಶದ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡುವ ಮೂಲಕ ಕೇಸರಿ ಪಕ್ಷವು ಜಾತಿ ಲೆಕ್ಕಾಚಾರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಮುಂದಾಗಿದೆ ಎನ್ನಲಾಗಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಕುಮಾವಂ ಪ್ರದೇಶದ ಠಾಕೂರ್ ಸಮುದಾಯದವರಾಗಿದ್ದಾರೆ.
ಮಹೇಂದ್ರ ಭಟ್ ಅವರು ಬಿಜೆಪಿಯ ಯುವ ಘಟಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ನಿಂದಲೇ ಹಂತಹಂತವಾಗಿ ಪಕ್ಷದಲ್ಲಿ ಬೆಳೆದು ಬಂದಿದ್ದಾರೆ. ಆರ್ಎಸ್ಎಸ್ ಹಿನ್ನೆಲೆ ಹೊಂದಿದ್ದಾರೆ.
ಉತ್ತರಾಖಂಡ ಬಿಜೆಪಿಯು ಕಳೆದ ಕೆಲವು ವರ್ಷಗಳಲ್ಲಿ ಅನೇಕ ಏಳುಬೀಳುಗಳನ್ನು ಕಂಡಿದೆ. ಕಳೆದ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡಿದೆ. ಧಾಮಿ ಅವರನ್ನು ಕೂಡ ಜಾತಿ ಲೆಕ್ಕಾಚಾರದಲ್ಲಿಯೇ ಮುಖ್ಯಮಂತ್ರಿಯಾಗಿ ಕೇಂದ್ರೀಯ ನಾಯಕತ್ವ ನೇಮಿಸಿತ್ತು ಎನ್ನಲಾಗಿದೆ.