ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಇದಕ್ಕೆ ಸಂಬಂಧಿಸಿದ ರಹಸ್ಯ ಕಾರ್ಯಾಚರಣೆಯ ಮತ್ತೊಂದು ವಿಡಿಯೊವನ್ನು ಗುರುವಾರ ಬಿಡುಗಡೆಗೊಳಿಸಿದೆ.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸ್ಟಿಂಗ್ ಆಪರೇಷನ್ ಬಿಡುಗಡೆ ಮಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಅಬಕಾರಿ ನೀತಿ ಭ್ರಷ್ಟಾಚಾರದಲ್ಲಿ ಸಿಬಿಐನ ಒಂಬತ್ತನೇ ಆರೋಪಿ ಅಮಿತ್ ಅರೋರಾ, ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಹಗರಣವನ್ನು ಬಯಲು ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಹಸ್ಯ ಕಾರ್ಯಾಚರಣೆಯ ವಿಡಿಯೊದಲ್ಲಿ ಹೊಸ ಅಬಕಾರಿ ನೀತಿಯಲ್ಲಿ ಹಗರಣವನ್ನು ಹೇಗೆ ಯೋಜಿಸಲಾಗಿದೆ ಮತ್ತು ಯಾರಿಂದ ಎಷ್ಟು ಪಡೆಯಲಾಗಿದೆ ಎಂಬುದನ್ನು ಬಹಿರಂಗಪಡಿಸಲಾಗಿದೆ ಎಂದವರು ಹೇಳಿದ್ದಾರೆ.
ಅಬಕಾರಿ ನೀತಿಯಲ್ಲಿ ಸರ್ಕಾರವೇ ಕಮಿಷನ್ ಮೊತ್ತ ನಿಗದಿ ಮಾಡಿದ್ದು, ಈ ಹಣವನ್ನು ಗೋವಾ ಮತ್ತು ಪಂಜಾಬ್ ಚುನಾವಣೆಯಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪ ಮಾಡಿದ್ದಾರೆ.
ಹೊಸ ಅಬಕಾರಿ ನೀತಿಯ ಅಡಿಯಲ್ಲಿ ಟೆಂಡರ್ಗಳನ್ನು ಪಡೆಯಲು ದೆಹಲಿ ಸರ್ಕಾರ ₹5 ಕೋಟಿ ಶುಲ್ಕ ನಿಗದಿಪಡಿಸಿದೆ. ಅಬಕಾರಿ ಪರವಾನಗಿ ಪಡೆಯುವವರು ಈಗಾಗಲೇ ಎಎಪಿಗೆ ₹100 ಕೋಟಿ ನಗದು ಪಾವತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.