ಜೈಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೊ ಯಾತ್ರೆಯು ಬಿಜೆಪಿಯಲ್ಲಿ ನಡುಕ ಸೃಷ್ಟಿಸಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸೋಮವಾರ ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿರುವ ಅವರು, ರಾಷ್ಟ್ರೀಯತೆಯ ಹೆಸರಲ್ಲಿ ಬಿಜೆಪಿ ದೇಶದ ಜನರನ್ನು ಹಾದಿ ತಪ್ಪಿಸಿದೆ. ಅದನ್ನೀಗ ಜನರು ಅರ್ಥಮಾಡಿಕೊಂಡಿದ್ದಾರೆ. ಈ ಹಿಂದೆ ಗುಜರಾತ್, ಹಿಮಾಚಲ ಪ್ರದೇಶದಲ್ಲಿ ನೀವದನ್ನು ಗಮನಿಸಿರಬಹುದು ಎಂದು ಹೇಳಿದರು.
ನಾವು ದೇಶಪ್ರೇಮಿಗಳಲ್ಲ. ಅವರು ಮಾತ್ರ ದೇಶಪ್ರೇಮಿಗಳು ಎಂದು ಬಿಜೆಪಿಯವರು ಅಂದುಕೊಂಡಿದ್ದಾರೆ. ಆದರೆ ಈಗ ಬಿಜೆಪಿ ಬಣ್ಣ ಬಯಲಾಗಿದೆ. ರಾಷ್ಟ್ರೀಯತೆಯ ಹೆಸರಿನ ಮೋಸವನ್ನು ಜನರು ಕ್ರಮೇಣ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದರು.
ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಯಾತ್ರೆ ಬಿಜೆಪಿಯಲ್ಲಿ ನಡುಕ ಸೃಷ್ಟಿಸಿದೆ. ಇದರಿಂದ ಬಿಜೆಪಿ ಭೀತಿಗೊಳಗಾಗಿದೆ ಎಂದು ಹೇಳಿದರು.