ನವದೆಹಲಿ: ಮುಂಬರುವ ಹಲವು ರಾಜ್ಯಗಳ ಚುನಾವಣೆಗೆ ಯೋಜನೆ ಸಿದ್ಧಪಡಿಸಲು ಬಿಜೆಪಿಯ ಹಿರಿಯ ನಾಯಕರು ಮತ್ತು ಸಚಿವರು ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶ, ಉತ್ತರಾಖಂಡ,ಹಿಮಾಚಲ ಪ್ರದೇಶ, ಗುಜರಾತ್,ಗೋವಾ ಮತ್ತು ಮಣಿಪುರದ ರಾಜ್ಯಗಳು ಅಸೆಂಬ್ಲಿ ಚುನಾವಣೆಯ ಹೊಸ್ತಿಲಲ್ಲಿವೆ. ಪಂಜಾಬ್ ಹೊರತು ಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲು ಬಿಜೆಪಿ ಆಡಳಿತದಲ್ಲಿದೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಿಎಂ ನರೇಂದ್ರ ಮೋದಿ ಸಂಪುಟದ ಹಿರಿಯ ಸಚಿವರು ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಏಳು ರಾಜ್ಯಗಳ ಚುನಾವಣೆ ಎದುರಿಸಲು ಅಗತ್ಯ ರೂಪುರೇಷೆಗಳನ್ನು ಹಾಕುವ ಕುರಿತಾಗಿ ಮತ್ತು ಆಡಳಿತ ವಿರೋಧಿ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ ಎಂದು 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ.
ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಇತರ ಸಚಿವರಾದ ಸ್ಮೃತಿ ಇರಾನಿ, ಕಿರಣ್ ರಿಜಿಜು, ನಿರ್ಮಲಾ ಸೀತಾರಾಮನ್, ಪ್ರಲ್ಹಾದ ಜೋಶಿ, ಪಿಯೂಶ್ ಗೋಯಲ್, ಬೈಜಯಂತ್ ಜೇ ಪಾಂಡ, ಮನ್ಸುಖ್ ಲಾಲ್ ಮಾಂಡವಿಯಾ ಇದ್ದರು ಎನ್ನಲಾಗಿದೆ.