ನವದೆಹಲಿ: ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಇನ್ನೂ ಐವರ ಗುರುತು ಪತ್ತೆಯಾಗಿದೆ. ದೇಹಗಳನ್ನು ಅವರವರ ಊರುಗಳಿಗೆ ಸಾಗಿಸಲಾಗುತ್ತಿದೆ ಎಂದು ಸೇನಾ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮಿಕ್ಕವರ ಗುರುತಿಸುವಿಕೆ ಪ್ರಯತ್ನಗಳು ಮುಂದುವರೆದಿವೆ ಎಂದು ಅವರು ಹೇಳಿದರು.
ಜ್ಯೂನಿಯರ್ ವಾರಂಟ್ ಆಫೀಸರ್ (ಜೆಡಬ್ಲ್ಯೂಒ) ಪ್ರದೀಪ್, ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಜೆಡಬ್ಲ್ಯೂಒ ರಾಣಾ ಪ್ರತಾಪ್ ದಾಸ್, ಲ್ಯಾನ್ಸ್ ನಾಯಕ್ ಬಿ ಸಾಯಿ ತೇಜಾ ಮತ್ತು ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಅವರ ಶವಗಳನ್ನು ಗುರುತು ಮಾಡಲಾಗಿದೆ.
’ಐವರು ಸಿಬ್ಬಂದಿಗಳ ಪಾರ್ಥಿವ ಶರೀರವನ್ನು ಇಂದು ಬೆಳಿಗ್ಗೆ ಕುಟುಂಬ ಸದಸ್ಯರಿಗೆ ಹಸ್ತಾಂತರಲಿಸಲಾಗಿದೆ,‘ ಎಂದೂ ಮಿಲಿಟರಿ ಅಧಿಕಾರಿಗಳು ತಿಳಿಸಿದರು.
ಪಾರ್ಥಿವ ಶರೀರಗಳನ್ನು ಮಿಲಿಟರಿ ಗೌರವದೊಂದಿಗೆ ಅಂತಿಮ ವಿಧಿವಿಧಾನಗಳಿಗಾಗಿ ವಿಮಾನದ ಮೂಲಕ ಅವರವರ ಊರುಗಳಿಗೆ ಕೊಂಡೊಯ್ಯಲಾಗುತ್ತದೆ ಎಂದೂ ಅಧಿಕಾರಿಗಳು ಹೇಳಿದರು.
ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ರಕ್ಷಣಾ ಸಲಹೆಗಾರ ಬ್ರಿಗೇಡಿಯರ್ ಎಲ್ಎಸ್ ಲಿದ್ದರ್ ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ದುರಂತದಲ್ಲಿ ಸಾವಿಗೀಡಾದ ಎಲ್ಲಾ 13 ಜನರ ಪಾರ್ಥಿವ ಶರೀರಗಳನ್ನು ಗುರುವಾರ ಸಂಜೆ ತಮಿಳುನಾಡಿನ ಸೂಲೂರಿನಿಂದ ದೆಹಲಿಗೆ ತರಲಾಗಿತ್ತು.
ಇನ್ನೂ ಗುರುತಾಗದ ದೇಹಗಳನ್ನು ದೆಹಲಿಯ ಕಂಟೋನ್ಮೆಂಟ್ನಲ್ಲಿರುವ ಸೇನಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.