ಲಖನೌ: ಪ್ರಯಾಗ್ರಾಜ್ ಜಿಲ್ಲೆಯಲ್ಲಿ ಪರಿಶಿಷ್ಟ ಕುಟುಂಬವೊಂದರ ನಾಲ್ವರನ್ನು ಹತ್ಯೆ ಮಾಡಿರುವುದನ್ನು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಶನಿವಾರ ಖಂಡಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ‘ಬಿಜೆಪಿ ನೇತೃತ್ವದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದೇ ಈ ಘಟನೆಗೆ ಕಾರಣ’ ಎಂದು ಆರೋಪಿಸಿದ್ದಾರೆ.
‘ಪರಿಶಿಷ್ಟ ಕುಟುಂಬದ ನಾಲ್ವರನ್ನು ಹತ್ಯೆಗೈದಿರುವುದು ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ. ಕಾನೂನು–ಸುವ್ಯವಸ್ಥೆ ವಿಷಯದಲ್ಲಿ ಬಿಜೆಪಿ ಕೂಡ ಹಿಂದಿನ ಸಮಾಜವಾದಿ ನೇತೃತ್ವದ ಸರ್ಕಾರದ ಹಾದಿಯಲ್ಲಿಯೇ ಸಾಗುತ್ತಿರುವಂತೆ ಕಂಡುಬರುತ್ತಿದೆ’ ಎಂದು ಟೀಕಿಸಿದ್ದಾರೆ.
‘ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು’ ಎಂದೂ ಅವರು ಒತ್ತಾಯಿಸಿದ್ದಾರೆ.