ಬಹರಾಯಿಚ್: ‘ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಮುಳುಗುತ್ತಿರುವ ಹಡಗು. ಬ್ರಾಹ್ಮಣರ ಮೇಲೆ ಪಕ್ಷಕ್ಕಿರುವ ಪ್ರೀತಿ ಕೇವಲ ಚುನಾವಣೆ ತಂತ್ರವಾಗಿದೆ’ ಎಂದು ಅಮಾನತುಗೊಂಡಿರುವ ಬಿಎಸ್ಪಿ ಶಾಸಕ ಅಸ್ಲಾಂ ರೈನಿ ಅವರು ದೂರಿದ್ದಾರೆ.
‘ಹಿಂದುಳಿದ ವರ್ಗ, ಮೇಲ್ಜಾತಿ ಮತ್ತು ಅಲ್ಪಸಂಖ್ಯಾತ ಜನರು ಬಿಎಸ್ಪಿಯೊಂದಿಗಿಲ್ಲ. ಒಂದು ಕಾಲದಲ್ಲಿ ಪ್ರಮುಖ ಬ್ರಾಹ್ಮಣ ನಾಯಕರಾದ ಬ್ರಜೇಶ್ ಪಾಠಕ್ ಅವರು ಪಕ್ಷದಲ್ಲಿದ್ದರು. ಈಗ ಸತೀಶ್ ಚಂದ್ರ ಮಿಶ್ರಾ ಅವರ ಹೆಸರಿನಲ್ಲಿ ಬ್ರಾಹ್ಮಣರು ಮುಳುಗುತ್ತಿರುವ ಹಡಗಿನೊಂದಿಗೆ ಕೈಜೋಡಿಸುವುದಿಲ್ಲ’ ಎಂದು ರೈನಿ ಅವರು ವಾಗ್ದಾಳಿ ನಡೆಸಿದರು.
‘ಬ್ರಾಹ್ಮಣ ಸಮುದಾಯವನ್ನು ತಲುಪುವ ನಿಟ್ಟಿನಲ್ಲಿ ಬಿಎಸ್ಪಿಯು ಅಯೋಧ್ಯೆಯಿಂದ ಜಾಗೃತಿ ಅಭಿಯಾನ ಆರಂಭಿಸಲಿದೆ. ಬ್ರಾಹ್ಮಣರು ಬಿಜೆಪಿ ಮಾತಿಗೆ ಮಾರು ಹೋಗಬಾರದು’ ಎಂದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಭಾನುವಾರ ಹೇಳಿದ್ದರು.
ಇದರ ಬೆನ್ನಲ್ಲೇ ವಾಗ್ದಾಳಿ ನಡೆಸಿದ ರೈನಿ ಅವರು,‘ ಲಖಿಂಪುರ್ ಖೇರಿ, ಸಿತಾಪುರ್, ಗೋರಖ್ಪುರ, ಬಲರಾಂಪುರ, ಬಹರಾಯಿಚ್, ಗೊಂಡಾ ಮತ್ತು ಶ್ರವಸ್ತಿಗಳ ಬ್ರಾಹ್ಮಣರೊಂದಿಗೆ ನಾನು ಮಾತನಾಡಿದ್ದೇನೆ. ಬ್ರಾಹ್ಮಣ ಸಮುದಾಯವು ಸಮಾಜವಾದಿ ಪಕ್ಷಕ್ಕೆ ಮತ ಚಲಾಯಿಸಲಿದೆ’ ಎಂದರು.
‘ಅಲ್ಪಸಂಖ್ಯಾತರು ಸಮಾಜವಾದಿ ಪಕ್ಷದ ಪರವಾಗಿ ಮತ ಚಲಾಯಿಸಲಿದ್ದಾರೆ. ಅಖಿಲೇಶ್ ಯಾದವ್ ಅವರು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಅವರ ನೇತೃತ್ವದಲ್ಲಿ ಜುಲೈ 23ರಂದು ಅಯೋಧ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಜಾಗೃತ ಅಭಿಯಾನ ಆರಂಭವಾಗಲಿದೆ.