ನವದೆಹಲಿ: ‘ಖಾಲಿಸ್ತಾನ್ ಪರ ಭಾವನೆಗಳನ್ನು ಉತ್ತೇಜಿಸುತ್ತಿವೆ ಎನ್ನಲಾದ ಕನಿಷ್ಠ ಆರು ಯೂಟ್ಯೂಬ್ ಚಾನೆಲ್ಗಳನ್ನು ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ನಿರ್ಬಂಧಿಸಲಾಗಿದೆ’ ಎಂದು ಮಾಹಿತಿ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿ ಅಪೂರ್ವ ಚಂದ್ರ ಅವರು ಶುಕ್ರವಾರ ತಿಳಿಸಿದರು.
‘ವಿದೇಶದಿಂದ ಕಾರ್ಯನಿರ್ವಹಿಸುತ್ತಿದ್ದ ಆರರಿಂದ ಎಂಟು ಚಾನೆಲ್ಗಳನ್ನು ಕಳೆದ 10 ದಿನಗಳಿಂದ ನಿರ್ಬಂಧಿಸಲಾಗಿದೆ. ಪಂಜಾಬಿ ಭಾಷೆಯಲ್ಲಿ ಕಾರ್ಯಕ್ರಮ ಪ್ರಸಾರ ಮಾಡುತ್ತಿದ್ದ ಈ ಚಾನೆಲ್ಗಳು ಪಂಜಾಬ್ನಲ್ಲಿ ಸಮಸ್ಯೆ ಉಂಟುಮಾಡಲು ಪ್ರಯತ್ನಿಸುತ್ತಿದ್ದವು’ ಎಂದು ಅವರು ಹೇಳಿದರು.
ತೀವ್ರಗಾಮಿ ಬೋಧಕ ಮತ್ತು ಖಾಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಅಮೃತಪಾಲ್ ಸಿಂಗ್ ಬೆಂಬಲಿಗರು ತಮ್ಮ ಆಪ್ತನೊಬ್ಬನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಕತ್ತಿ ಮತ್ತು ಬಂದೂಕುಗಳೊಂದಿಗೆ ಅಜ್ನಾಲಾದ ಪೊಲೀಸ್ ಠಾಣೆಗೆ ನುಗ್ಗಿದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
‘48 ಗಂಟೆಗಳ ಒಳಗೆ ಚಾನೆಲ್ಗಳನ್ನು ನಿರ್ಬಂಧಿಸುವಂತೆ ಸರ್ಕಾರ ವಿನಂತಿಸಿಕೊಂಡ ಮೇರೆಗೆ ಯೂಟ್ಯೂಬ್ ಈ ಕ್ರಮ ತೆಗೆದುಕೊಂಡಿದೆ’ ಎಂದು ಮತ್ತೊಬ್ಬ ಹಿರಿಯ ಅಧಿಕಾರಿ ಹೇಳಿದರು.
‘ಆಕ್ಷೇಪಾರ್ಹ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಚಾನೆಲ್ಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲು ಕೃತಕ ಬುದ್ಧಿಮತ್ತೆ ಹಾಗೂ ಅಲ್ಗಾರಿದಮ್ಗಳನ್ನು ಬಳಸಬೇಕೆಂದು ಸರ್ಕಾರ ಯೂಟ್ಯೂಬ್ ಅನ್ನು ಕೇಳಿಕೊಂಡಿದೆ’ ಎಂದು ಅವರು ಮಾಹಿತಿ ನೀಡಿದರು.