ನವದೆಹಲಿ: ಮುಂಗಾರು ಅವಧಿಯ ಬೆಳೆಗಳ ಮಾರುಕಟ್ಟೆ ಅವಧಿ ಆರಂಭವಾಗಿದ್ದು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಖರೀದಿಸುವ ಪ್ರಕ್ರಿಯೆಯನ್ನು ಮುಂದುವರಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಹೇಳಿದೆ.
ಅಕ್ಟೋಬರ್ 7ರವರೆಗೆ ನೋಡಲ್ ಏಜೆನ್ಸಿಗಳ ಮೂಲಕ ₹2.71 ಕೋಟಿ ಕನಿಷ್ಠ ಬೆಂಬಲ ಬೆಲೆ ಮೌಲ್ಯದ 376.65 ಮೆಟ್ರಿಕ್ ಟನ್ ಪಚ್ಚೆ ಹೆಸರು ಖರೀದಿಸಲಾಗಿದೆ. ಇದರಿಂದ ತಮಿಳುನಾಡು ಮತ್ತು ಕರ್ನಾಟಕದ 3,961 ರೈತರಿಗೆ ಪ್ರಯೋಜನವಾಗಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.
ಕನಿಷ್ಠ ಬೆಂಬಲ ಬೆಲೆ ಖರೀದಿ ಮುಂದುವರಿಯಲಿದೆ ಎಂಬ ಒಕ್ಕಣೆಯೊಂದಿಗೆ ಈ ಟ್ವೀಟ್ ಮಾಡಲಾಗಿದೆ. ಕೇಂದ್ರ ಸರ್ಕಾರವು ಇತ್ತೀಚೆಗೆ ಸಂಸತ್ನಲ್ಲಿ ಅನುಮೋದನೆ ಪಡೆದಿರುವ ಹೊಸ ಕೃಷಿ ಮಸೂದೆಗಳಿಂದ ಕನಿಷ್ಠ ಬೆಂಬಲ ಬೆಲೆ ರದ್ದಾಗಲಿದೆ ಎಂದು ಪ್ರತಿಪಕ್ಷಗಳು ಆರೋಪಿಸುತ್ತಿರುವ ಬೆನ್ನಲ್ಲೇ ಈ ಟ್ವೀಟ್ ಮಾಡಲಾಗಿದೆ.
ಈ ವರ್ಷ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶಗಳಿಂದ 30.70 ಲಕ್ಷ ಮೆಟ್ರಿಕ್ ಟನ್ ಖಾದ್ಯ ಮತ್ತು ಎಣ್ಣೆ ಬೀಜಗಳ ಖರೀದಿಗೆ ಸಮ್ಮತಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳಗಳಿಂದ 1.23 ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ನಿರ್ಧರಿಸಲಾಗಿದೆ ಎಂದೂ ಸಚಿವಾಲಯ ತಿಳಿಸಿದೆ.