ನವದೆಹಲಿ: ಕೋವಿಡ್ ಪ್ರಸರಣ ತಡೆಗಾಗಿ ವಿವಿಧ ರಾಜ್ಯಗಳು ಹೇರಿರುವ ನಿರ್ಬಂಧಗಳಿಂದ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂಥ ಕಾರ್ಮಿಕರ ನೆರವಿಗಾಗಿ 20 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.
ಇದೇ ಉದ್ದೇಶಕ್ಕಾಗಿ ಕಳೆದ ಏಪ್ರಿಲ್ನಲ್ಲಿ ಕೇಂದ್ರ ಸರ್ಕಾರ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿತ್ತು. ಇವುಗಳ ಪೈಕಿ 20 ನಿಯಂತ್ರಣ ಕೊಠಡಿಗಳನ್ನು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಪುನಶ್ಚೇತನಗೊಳಿಸಿದೆ ಎಂದು ಸಚಿವಾಲಯದ ಕಾರ್ಯದರ್ಶಿ ಅಪೂರ್ವಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ರಾಜ್ಯಗಳಲ್ಲಿನ ಮುಖ್ಯಕಾರ್ಮಿಕ ಆಯುಕ್ತರ ಕಚೇರಿಗಳ ಸಮನ್ವಯದೊಂದಿಗೆ ಈ ಕೊಠಡಿಗಳು ಕಾರ್ಯ ನಿರ್ವಹಿಸಲಿವೆ. ತೊಂದರೆ ಎದುರಿಸುತ್ತಿರುವ ಕಾರ್ಮಿಕರು ಇಲಾಖೆಯ ಅಧಿಕಾರಿಗಳನ್ನು ಇ–ಮೇಲ್, ಮೊಬೈಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಸಂಪರ್ಕಿಸಿ, ಪರಿಹಾರ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.