ನವದೆಹಲಿ: 30 ವರ್ಷ ಸೇವೆ ಪೂರೈಸಿರುವ ನೌಕರರ ಸೇವಾಪುಸ್ತಕ ಪರಾಮರ್ಶೆ ನಡೆಸಬೇಕು. ಅದಕ್ಷ ಹಾಗೂ ಭ್ರಷ್ಟ ನೌಕರರನ್ನು ಗುರುತಿಸಿ, ಅವರಿಗೆ ಅವಧಿಪೂರ್ವ ನಿವೃತ್ತಿ ನೀಡಬೇಕು ಎಂದು ಕೇಂದ್ರ ಸರ್ಕಾರ ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಬ್ಬಂದಿ ಸಚಿವಾಲಯ ಈ ಸಂಬಂಧ ಹೊರಡಿಸಿರುವ ಆದೇಶದಲ್ಲಿ ತಿಳಿಸಿದೆ.
‘ಅವಧಿಪೂರ್ವ ನಿವೃತ್ತಿ ನೀಡುವುದನ್ನು ದಂಡ ವಿಧಿಸುವುದು ಎಂಬುದಾಗಿ ಅರ್ಥೈಸಬಾರದು. ಇದು ಕಡ್ಡಾಯ ನಿವೃತ್ತಿಯೂ ಆಗದು’ ಎಂದೂ ಸಚಿವಾಲಯ ಸ್ಪಷ್ಟಪಡಿಸಿದೆ.
ಅದಕ್ಷ, ಭ್ರಷ್ಟರೆಂದು ಗುರುತಿಸಲಾಗುವ ನೌಕರರಿಗೆ ಸಾರ್ವಜನಿಕರ ಹಿತದೃಷ್ಟಿಯಿಂದ ಅವಧಿಪೂರ್ವ ನಿವೃತ್ತಿ ನೀಡಲುಕೇಂದ್ರ ನಾಗರಿಕ ಸೇವಾ ನಿಯಮಗಳಡಿ ಸಂಬಂಧಪಟ್ಟ ಇಲಾಖೆಗೆ ಅಧಿಕಾರ ಇದೆ.