ಚಂಡೀಗಢ: ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಳ್ಳದ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ತನ್ನನ್ನು ತಾನೇ 'ಆಮ್ ಆದ್ಮಿ'(ಸಾಮಾನ್ಯ ಮನುಷ್ಯ) ಎಂದು ಕರೆದುಕೊಳ್ಳುತ್ತಾರೆ ಎಂದು ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ ವಾಗ್ದಾಳಿ ನಡೆಸಿದ್ದಾರೆ.
'ಮನಸ್ಸಿಗೆ ಬಂದಂತೆ ದುಡ್ಡು ಖರ್ಚು ಮಾಡುವ ಜೀವನಶೈಲಿಯನ್ನು ಹೊಂದಿರುವ ಮನುಷ್ಯನಿಗೆ ಜನಸಾಮಾನ್ಯರ ಕಷ್ಟಗಳ ಅರಿವು ಹೇಗಾಗುತ್ತದೆ?' ದೆಹಲಿ ಸಿಎಂ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ಚರಣ್ಜಿತ್ ಸಿಂಗ್ ಚನ್ನಿ ವ್ಯಂಗ್ಯ ಮಾಡಿದ್ದಾರೆ.
'ಯಾವ ಸಾಮಾನ್ಯ ಮನುಷ್ಯ ಐಷಾರಾಮಿ ಹೋಟೆಲ್ನಲ್ಲಿ ತಂಗುತ್ತಾರೆ?' ಎಂದು ಅರವಿಂದ ಕೇಜ್ರಿವಾಲ್ ಅವರನ್ನು ಪ್ರಶ್ನಿಸಿದ ಚನ್ನಿ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿರುವ ತನ್ನಂತಹ ವ್ಯಕ್ತಿಗಳಿಗೆ ಜನಸಾಮಾನ್ಯರ ಸಮಸ್ಯೆಗಳು ಅರ್ಥವಾಗುತ್ತದೆ ಎಂದು ರ್ಯಾಲಿಯಲ್ಲಿ ಹೇಳಿದ್ದಾರೆ.
'ದೆಹಲಿಯಲ್ಲಿ ಬಂಗಲೆಯಲ್ಲಿ ಜೀವಿಸುವವರು ಮತ್ತು ಪಂಜಾಬ್ಗೆ ಚುನಾವಣೆ ರ್ಯಾಲಿಗೆ ಬಂದು ಐಶಾರಾಮಿ ಹೋಟೆಲ್ನಲ್ಲಿ ತಂಗುವವರು ಆಟೋ ರಿಕ್ಷಾ ಮೂಲಕ ಜನಸಾಮಾನ್ಯರ ಮನೆಗೆ ಭೇಟಿ ನೀಡುವ ನಾಟಕ ಮಾಡುತ್ತಿದ್ದಾರೆ' ಎಂದು ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ.