ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರದ ಉದ್ದೇಶ ಒಳಗೊಂಡ ದಾನ ಅಪಾಯಕಾರಿ: ಸುಪ್ರೀಂ ಕೋರ್ಟ್‌ ಕಳವಳ

ಸುಪ್ರೀಂ ಕೋರ್ಟ್‌ ಕಳವಳ
Last Updated 5 ಡಿಸೆಂಬರ್ 2022, 15:53 IST
ಅಕ್ಷರ ಗಾತ್ರ

ನವದೆಹಲಿ: ‘ದಾನ ಹಾಗೂ ಉತ್ತಮ ಕೆಲಸಗಳು ಮತಾಂತರದ ಉದ್ದೇಶ ಒಳಗೊಂಡಿರಬಾರದು. ಮತಾಂತರಕ್ಕಾಗಿ ನಡೆಸುವ ಪ್ರಲೋಭನೆಯು ಅತ್ಯಂತ ಅಪಾಯಕಾರಿ’ ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಕಾನೂನುಬಾಹಿರ ಮತಾಂತರ ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಕೋರಿ ವಕೀಲ ಅಶ್ವಿನಿಕುಮಾರ್‌ ಉ‍ಪಾಧ್ಯಾಯ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಮತ್ತು ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠವು ಇದರ ವಿಚಾರಣೆ ನಡೆಸಿತು.

‘ದಾನ–ಧರ್ಮ ಹಾಗೂ ಉತ್ತಮ ಕೆಲಸಗಳು ಸ್ವಾಗತಾರ್ಹವಾದುವು. ಆದರೆ ಅವುಗಳ ಉದ್ದೇಶ ಏನು ಎಂಬುದನ್ನು ಮನಗಾಣಬೇಕು. ನಂಬಿಕೆ ಬೇರೆ. ಮತಾಂತರಕ್ಕಾಗಿ ಇಲ್ಲ ಸಲ್ಲದ ಆಸೆ ತೋರಿಸುವುದು ಅಪಾಯಕಾರಿ’ ಎಂದು ನ್ಯಾಯಪೀಠ ತಿಳಿಸಿದೆ.

‘ತಮಗೆ ಬೇಕಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಅದು ಪ್ರಲೋಭನೆಯಿಂದ ಕೂಡಿರಬಾರದು. ನಿರ್ದಿಷ್ಟ ವ್ಯಕ್ತಿಗೆ ಸಹಾಯ ಮಾಡಬೇಕು ಎಂದು ಅನಿಸಿದರೆ ಸಹಾಯ ಮಾಡಿ. ಆದರೆ ಅದರ ಉದ್ದೇಶ ಮತಾಂತರ ಆಗಿರಬಾರದು. ಆಸೆ ತೋರಿಸುವುದು ಅಪಾಯಕಾರಿ. ಇದು ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧವಾದುದು. ಭಾರತದಲ್ಲಿ ನೆಲೆಸಿರುವ ಪ್ರತಿಯೊಬ್ಬರೂ ದೇಶದ ಸಂಸ್ಕೃತಿ ಹಾಗೂ ಸಾಮರಸ್ಯಕ್ಕೆ ಅನುಗುಣವಾಗಿಯೇ ಕಾರ್ಯನಿರ್ವಹಿಸುವುದು ಅತ್ಯಗತ್ಯ’ ಎಂದು ನ್ಯಾಯಪೀಠ ಹೇಳಿದೆ.

ಮತಾಂತರ ನಿಷೇಧ ಕಾಯ್ದೆಯ ಕುರಿತು ಎಲ್ಲಾ ರಾಜ್ಯಗಳಿಂದಲೂ ಮಾಹಿತಿ ಪಡೆದು ಸವಿವರವಾದ ವರದಿಯನ್ನು ಸಲ್ಲಿಸುವಂತೆ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಇದಕ್ಕೆ ಮತ್ತಷ್ಟು ಕಾಲಾವಕಾಶ ನೀಡಬೇಕೆಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮನವಿ ಮಾಡಿದರು.

ಮೆಹ್ತಾ ಅವರ ಮನವಿ ಪುರಸ್ಕರಿದ ನ್ಯಾಯಪೀಠ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು.

ಬಲವಂತದ ಮತಾಂತರ ತಡೆಯಲು ಯಾವ ಕ್ರಮ ಕೈಗೊಳ್ಳಲಾಗಿದೆ, ಈ ವಿಚಾರದಲ್ಲಿ ಸರ್ಕಾರದ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ನ್ಯಾಯಾಲಯವು ನವೆಂಬರ್‌ 14ರಂದು ಕೇಂದ್ರ ಸರ್ಕಾರವನ್ನು ಕೇಳಿತ್ತು. ಇದು ಗಂಭೀರವಾದ ವಿಚಾರ. ಇದರಿಂದ ದೇಶದ ಭದ್ರತೆ ಹಾಗೂ ನಾಗರಿಕರ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುವ ಅಪಾಯವಿದೆ ಎಂದು ನ್ಯಾಯಾಲಯ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT