ಕಾಂಕೇರ್, ಛತ್ತೀಸಗಡ: ಛತ್ತೀಸಗಡ ವಿಧಾನಸಭೆಯ ಉಪ ಸಭಾಧ್ಯಕ್ಷ ಹಾಗೂ ಕಾಂಗ್ರೆಸ್ ಶಾಸಕ ಮನೋಜ್ ಸಿಂಗ್ ಮಾಂಡವಿ (58) ಅವರು ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.
ಕಾಂಕೇರ್ ಜಿಲ್ಲೆಯ ಭಾನುಪ್ರತಾಪಪುರ ಕ್ಷೇತ್ರದ ಶಾಸಕರಾಗಿದ್ದ ಮಾಂಡವಿ ಅವರು, ಶನಿವಾರ ರಾತ್ರಿ ಚರಮ ಬಳಿಯಲ್ಲಿನ ತಮ್ಮ ಸ್ವಗ್ರಾಮ ನಾಥಿಯಾ ನವಗಾಂವ್ನಲ್ಲಿದ್ದರು.
‘ಮಾಂಡವಿ ಅವರಿಗೆ ಭಾನುವಾರ ಬೆಳಿಗ್ಗೆ ಹೃದಯಾಘಾತವಾದ ತಕ್ಷಣವೇ ಧಮತರಿಯಲ್ಲಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ರಾಜ್ಯ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ್ ಆನಂದ್ ಶುಕ್ಲಾ ಅವರು ತಿಳಿಸಿದ್ದಾರೆ.
‘ಅಗಲಿದ ನಾಯಕನ ಗೌರವಾರ್ಥ ಅವರ ತವರು ಜಿಲ್ಲೆ ಕಾಂಕೇರ್ ಮತ್ತು ರಾಜಧಾನಿ ರಾಯ್ಪುರದಲ್ಲಿ ಭಾನುವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿತ್ತು’ ಎಂದು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
‘ಮಾಂಡವಿ ಅವರ ಮೃತದೇಹವನ್ನು ಅವರ ಸ್ವಗ್ರಾಮಕ್ಕೆ ಕೊಂಡೊಯ್ಯಲಾಗಿದೆ. ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.