ಜಗದಲ್ಪುರ: ಛತ್ತೀಸಗಢದಲ್ಲಿ ಮುದಿನ ಹಣಕಾಸು ವರ್ಷದಿಂದ ನಿರುದ್ಯೋಗಿ ಯುವಕರಿಗೆ ಮಾಸಿಕ ಭತ್ಯೆಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹೇಳಿದ್ದಾರೆ. ಆದರೆ ಭತ್ಯೆಯ ಪ್ರಮಾಣವನ್ನು ಅವರು ತಿಳಿಸಿಲ್ಲ.
ಗುರುವಾರ ಇಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಪ್ರಮುಖ ಭರವಸೆಗಳಲ್ಲಿ ನಿರುದ್ಯೋಗ ಭತ್ಯೆ ನೀಡುವುದೂ ಒಂದಾಗಿತ್ತು. ಇದೇ ಕಾರಣಕ್ಕೆ 15 ವರ್ಷಗಳ ಬಳಿಕ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ’ ಎಂದರು.
ಗುಡಿ ಕೈಗಾರಿಕೆ ಆಧಾರಿತ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ರಾಜ್ಯದಲ್ಲಿ ಗ್ರಾಮೀಣ ಉದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.
ಈ ವರ್ಷದ ಅಂತ್ಯದ ವೇಳೆ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ.