ಬಿಜಾಪುರ: ಚತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರ ಮೇಲಿನ ಹಲವು ದಾಳಿಗಳ ಪ್ರಮುಖ ಆರೋಪಿಯಾಗಿದ್ದ ನಕ್ಸಲ್ ಮಹಿಳೆಯೊಬ್ಬರು ಶರಣಾಗಿದ್ದಾರೆ. ಮನೆಗೆ ಹಿಂತಿರುಗಿ ಮಗಳ ಜೊತೆಗೆ ಕೂಡಿಕೊಳ್ಳಲು ಈ ನಿರ್ಧಾರ ಕೈಗೊಂಡಿದ್ದಾರೆ.
32 ವರ್ಷದ ಸೋಮ್ಲಿ ಸೊದಿ ಅಲಿಯಾಸ್ ವನಿತಾ 2003ರಿಂದ ನಿಷೇಧಿತ ಬಂಡುಕೋರ ಸಂಘಟನೆ ಜೊತೆ ಕೆಲಸ ಮಾಡುತ್ತಿದ್ದರು. 2018ರಿಂದ ನಕ್ಸಲ್ ತಂಡದ ನಗರಂ ಸ್ಥಳೀಯ ಗುಂಪಿನ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದರು. ವನಿತಾ ಅವರಸುಳಿವು ನೀಡಿದವರಿದೆ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.
ಮಗಳು ಮತ್ತು ಕುಟುಂಬಕ್ಕೋಸ್ಕರ ವನಿತಾ ಅವರು ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಬಿಜಾಪುರ ಎಸ್ಪಿ ಆಂಜನೇಯ ವರ್ಷಣೈ ಅವರು ತಿಳಿಸಿದ್ದಾರೆ.
ನಕ್ಸಲ್ ಸಂಘಟನೆಯಲ್ಲಿನ ಟೊಳ್ಳು ಮಾವೋವಾದಿ ಸಿದ್ಧಾಂತ, ಅಸಮಾನತೆ ಮತ್ತು ಶೋಷಣೆಯಿಂದ ಬೇಸತ್ತು ಹಾಗೂ ಕುಟುಂಬ ಮತ್ತು ಮಗಳ ಮೇಲಿನ ಮಮತೆಯಿಂದ ಶರಣಾಗಿದ್ದಾಗಿ ವನಿತಾ ಅವರು ಪ್ರತಿಕ್ರಿಯಿಸಿದ್ದಾರೆ.
ಶನಿವಾರ ವನಿತಾ ಅವರು ಪೊಲೀಸರಿಗೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ. ರಾಜ್ಯ ಸರ್ಕಾರವು ನಕ್ಸಲ್ ಸಂಘಟನೆ ತೊರೆದಿದ್ದಕ್ಕೆ ವನಿತಾ ಅವರಿಗೆ ಪುನರ್ವಸತಿ ಯೋಜನೆಯಡಿ ₹ 10,000 ಪ್ರೋತ್ಸಾಹ ಧನವನ್ನು ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.