ಕೋಲ್ಕತ್ತ: ನಂದಿಗ್ರಾಮದ ಬಿಜೆಪಿ ಶಾಸಕ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಅಂಗರಕ್ಷನ ಸಾವಿನ ತನಿಖೆಯನ್ನು ಪಶ್ಚಿಮ ಬಂಗಾಳ ಅಪರಾಧ ತನಿಖಾ ಇಲಾಖೆ (ಸಿಐಡಿ) ಸೋಮವಾರ ಕೈಗೆತ್ತಿಕೊಂಡಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಸುವೇಂದು ಅಧಿಕಾರಿಯ ಅಂಗರಕ್ಷಕ ಸುಬ್ರತಾ ಚಕ್ರವರ್ತಿ ಅವರ ಸಾವಿನ ಬಗ್ಗೆ ನಾವು ತನಿಖೆ ನಡೆಸಲಿದ್ದೇವೆ. ಅವರ ಪತ್ನಿ ಪೊಲೀಸರಿಗೆ ದೂರು ನೀಡಿದ ಆಧಾರದ ಮೇಲೆ ತನಿಖೆ ಕೈಗೊಂಡಿರುವುದಾಗಿ ಸಿಐಡಿ ಅಧಿಕಾರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಟಿಎಂಸಿ ಸಂಸದರಾಗಿದ್ದಾಗಿನಿಂದ ಸುವೇಂದು ಅಧಿಕಾರಿಯ ಭದ್ರತಾ ತಂಡದ ಭಾಗವಾಗಿದ್ದ 40 ವರ್ಷದ ಚಕ್ರವರ್ತಿ ಅವರು ರಾಜ್ಯ ಸಶಸ್ತ್ರ ಪೊಲೀಸ್ ಸಿಬ್ಬಂದಿಯಾಗಿದ್ದರು. 2015 ರಲ್ಲಿ ಸುವೇಂದು ರಾಜ್ಯ ಸಚಿವರಾದ ನಂತರವೂ ತಂಡದಲ್ಲಿ ಮುಂದುವರಿದಿದ್ದರು.
ಚಕ್ರವರ್ತಿ ಅವರ ಪತ್ನಿ ಸುಪರ್ಣ ಚಕ್ರವರ್ತಿ ಅವರು ಇತ್ತೀಚೆಗಷ್ಟೇ ಪತಿಯ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿ ಕಾಂತಿ ಪೊಲೀಸ್ ಠಾಣೆಗೆ ಹೊಸದಾಗಿ ದೂರು ನೀಡಿದ್ದರು. ಈ ಬಗ್ಗೆ ಪಶ್ಚಿಮ ಬಂಗಾಳದ ಪೊಲೀಸರು ತನಿಖೆ ನಡೆಸುತ್ತಿದ್ದರು.