ಮುಂಬೈ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಚುರುಕು ಹಾಗೂ ಜಾಣ ನಡೆ ಅಗತ್ಯ ಎಂದು ಶಿವಸೇನಾ ಹೇಳಿದೆ.
ರಾಜಕೀಯ ಚದುರಂಗದ ಆಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ತಡೆಹಿಡಿಯಬಹುದು ಎಂಬುದನ್ನು ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಚುನಾವಣೆ ಫಲಿತಾಂಶಗಳು ತೋರಿಸಿಕೊಟ್ಟಿವೆ ಎಂದು ತಿಳಿಸಿದೆ.
ಬಿಜೆಪಿ ವಿರುದ್ಧ ಹೋರಾಡಲು ಬಲವಾದ ಇಚ್ಛಾಶಕ್ತಿ ಅಗತ್ಯ ಎಂದು ಪಕ್ಷದ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.
2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ವಿಚಾರದಲ್ಲಿ ಶಿವಸೇನೆ ಹಾಗೂ ಬಿಜೆಪಿ ನಡುವಣ ಮೈತ್ರಿ ಮುರಿದುಬಿತ್ತು. ಬಳಿಕ ಎನ್ಸಿಪಿ ಹಾಗೂ ಕಾಂಗ್ರೆಸ್ ಜೊತೆ ಸೇರಿಕೊಂಡು ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ರಚಿಸಿತ್ತು.
ಅತ್ತ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತೆ ಬಿಜೆಪಿ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗಾಗಿಸಿ ಭರ್ಜರಿ ಗೆಲುವು ದಾಖಲಿಸಿತ್ತು.
ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 19 ರ್ಯಾಲಿಗಳನ್ನು ಹಮ್ಮಿಕೊಂಡಿದ್ದರು. ಗೃಹ ಸಚಿವ ಅಮಿತ್ ಶಾ ರಾಜಕೀಯ ಯೋಜನೆ, ಹಣಕಾಸು ನಿರ್ವಹಣೆಯ ಹೊರತಾಗಿಯೂ ಸೋಲು ಎದುರಾಗಿತ್ತು.