ಕೋಲ್ಕತ್ತ: ಈಸ್ಟರ್ನ್ ಕೋಲ್ಫೀಲ್ಡ್ ಲಿಮಿಟೆಡ್ (ಇಸಿಎಲ್) ಸಂಸ್ಥೆಗೆ ಸೇರಿದ ಭದ್ರತಾ ಅಧಿಕಾರಿಯೊಬ್ಬರು ಶನಿವಾರ ತಮ್ಮ ನಿವಾಸದಲ್ಲಿ ಸಿಬಿಐ ತನಿಖೆ ಸಂದರ್ಭದಲ್ಲೇ ಮೃತಪಟ್ಟಿದ್ದಾರೆ.
ಧನಂಜಯ್ ರಾಯ್ ಮೃತಪಟ್ಟವರು. ಇವರು ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಕುನುಸ್ತೋರಿಯಾದಲ್ಲಿ ಸರ್ಕಾರದ ಸಂಸ್ಥೆಯಲ್ಲಿ ಭದ್ರತಾ ಅಧಿಕಾರಿ ಆಗಿದ್ದಾರೆ.
ಸಿಬಿಐ ದಾಳಿ ಸಂದರ್ಭದಲ್ಲಿ ಅನಾರೋಗ್ಯದಿಂದ ಅವರು ಕುಸಿದುಬಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅವರು ಮಾರ್ಗಮಧ್ಯೆಯೇ ಮೃತಪಟ್ಟರು ಎಂದು ಇಸಿಎಲ್ ಮೂಲಗಳು ತಿಳಿಸಿವೆ.
ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಸಿಬಿಐ ನಾಲ್ಕು ರಾಜ್ಯಗಳ ವಿವಿಧ 45 ಕಡೆ ದಾಳಿ ನಡೆಸಿತ್ತು. ದಾಳಿಯು ಪಶ್ಚಿಮ ಬಂಗಾಳ, ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶದಲ್ಲಿ ನಡೆದಿತ್ತು ಎಂದು ಸಿಬಿಐ ಮೂಲಗಳು ತಿಳಿಸಿವೆ.