ಪುಣೆ: ‘2024ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರ್ಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬರಲಿದೆ’ ಎಂದು ಶಿವಸೇನಾದ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಶನಿವಾರ ಇಲ್ಲಿ ಹೇಳಿದರು.
‘ಮುಂದಿನ ಸಾರ್ವತ್ರಿಕ ಚುನಾವಣೆ ನಂತರ ಕೇಂದ್ರದಲ್ಲಿ ಒಂದು ಪಕ್ಷದ ಆಡಳಿತ ಕೊನೆಯಾಗುವುದು’ ಎಂದೂ ಹೇಳಿದರು.
ಪುಣೆ ಪ್ರೆಸ್ ಕ್ಲಬ್ ಆಯೋಜಿಸಿದ್ದ ‘ಜೆ.ಎಸ್.ಕರಂದೀಕರ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ದೇಶದಲ್ಲಿ ಕಾಂಗ್ರೆಸ್ ಪಕ್ಷ ಬೇರು ಮಟ್ಟದಲ್ಲಿಯೂ ನೆಲೆ ಹೊಂದಿದೆ. ಹೀಗಾಗಿ ಕಾಂಗ್ರೆಸ್ ಇಲ್ಲದೇ ವಿರೋಧ ಪಕ್ಷಗಳನ್ನು ಒಳಗೊಂಡ ಯಾವುದೇ ಸರ್ಕಾರ ರಚನೆ ಸಾಧ್ಯವಿಲ್ಲ. ಇದು ಪ್ರಮುಖ ವಿರೋಧ ಪಕ್ಷವೂ ಆಗಿದೆ’ ಎಂದು ಹೇಳಿದರು.
‘ಇನ್ನೂ ಕೆಲ ದಶಕಗಳ ಕಾಲ ಬಿಜೆಪಿ ಅಧಿಕಾರದಲ್ಲಿ ಇರಲಿದೆ’ ಎಂಬ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೇಳಿಕೆ ಕುರಿತ ಪ್ರಶ್ನೆಗೆ, ‘ಭಾರತದ ರಾಜಕೀಯದಲ್ಲಿ ಬಿಜೆಪಿ ಒಂದು ವಿರೋಧ ಪಕ್ಷವಾಗಿ ಇದ್ದೇ ಇರುತ್ತದೆ’ ಎಂದು ಉತ್ತರಿಸಿದರು.
‘ಜಗತ್ತಿನಲ್ಲಿಯೇ ದೊಡ್ಡ ಪಕ್ಷ ಎಂಬುದಾಗಿ ಬಿಜೆಪಿ ಹೇಳಿಕೊಳ್ಳುತ್ತದೆ. ಒಂದು ವೇಳೆ ಚುನಾವಣೆಯಲ್ಲಿ ಸೋತರೆ ಅದು ವಿರೋಧ ಪಕ್ಷವಾಗಿ ಉಳಿಯಲಿದೆ. ಉದಾಹರಣೆಗೆ, ಮಹಾರಾಷ್ಟ್ರದಲ್ಲಿ ಈಗ 105 ಶಾಸಕರಿರುವ ಬಿಜೆಪಿ ಪ್ರಮುಖ ವಿರೋಧ ಪಕ್ಷವಾಗಿದೆ’ ಎಂದೂ ಹೇಳಿದರು.