ಚೆನ್ನೈ: ತಮಿಳುನಾಡು ರಾಜ್ಯಪಾಲರನ್ನು ವಜಾ ಮಾಡಿ ಎಂದು ಆಡಳಿತರೂಢ ಡಿಎಂಕೆ ಪಕ್ಷ ರಾಷ್ಟ್ರಪತಿಗಳಿಗೆ ಜ್ಞಾಪಕ ಪತ್ರ ಸಲ್ಲಿಸಿದೆ. ರಾಜ್ಯಪಾಲ ಆರ್.ಎನ್ ರವಿ ‘ಶಾಂತಿಭಂಗ‘ಕ್ಕೆ ಕಾರಣವಾಗುತ್ತಿದ್ದಾರೆ ಎಂದು ಡಿಎಂಕೆ ಆರೋಪಿಸಿದೆ.
‘ಸಂವಿಧಾನ ಬದ್ಧವಾಗಿ ಆಯ್ಕೆಯಾದ ಸರ್ಕಾರಕ್ಕೆ ಜನರ ಸೇವೆ ಮಾಡಲು ರಾಜ್ಯಪಾಲರು ಅಡ್ಡಿಪಡಿಸುತ್ತಿದ್ದಾರೆ. ಅವರು ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ‘ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ ಜ್ಞಾಪಕಪತ್ರದಲ್ಲಿ ಡಿಎಂಕೆ ಆರೋಪಿಸಿದೆ.
‘ಸಂವಿಧಾನವನ್ನು ರಕ್ಷಣೆ ಮಾಡುತ್ತೇನೆ ಎಂದು ಪ್ರತಿಜ್ಞೆ ಸ್ವೀಕಾರ ಮಾಡಿರುವ ಅವರು ಅದನ್ನು ಪಾಲನೆ ಮಾಡುತ್ತಿಲ್ಲ. ವಿಧಾನಸಭೆಯಲ್ಲಿ ಅನುಮೋದನೆ ಪಡೆದುಕೊಂಡ ಮಸೂದೆಗಳಿಗೆ ಒಪ್ಪಿಗೆ ನೀಡಲು ತಡ ಮಾಡುತ್ತಿದ್ದಾರೆ‘ ಎಂದು ಡಿಎಂಕೆ ಅಸಮಾಧಾನ ವ್ಯಕ್ತ ಪಡಿಸಿದೆ.
‘ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ವೇಳೆ ಅವರು ನೀಡುವ ಹೇಳಿಕೆಗಳು ಕೆಲವೊಮ್ಮೆ ದೇಶದ್ರೋಹ ಹೇಳಿಕೆ ಎಂದು ಪರಿಗಣಿಸಬಹುದು‘ ಎಂದು ಹೇಳಿರುವ ಡಿಎಂಕೆ, ರಾಜ್ಯಪಾಲ ಆರ್.ಎನ್ ರವಿಯವರು ಸಂವಿಧಾನಿಕ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರು. ಅವರನ್ನು ಕಿತ್ತು ಹಾಕಬೇಕು‘ ಎಂದು ಆಗ್ರಹಿಸಿದೆ.
ಈ ಸಂಬಂಧ ರಾಜ್ಯಪಾಲರಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬಿಜೆಪಿಯೇತರ ಸರ್ಕಾರ ಇರುವ ದಕ್ಷಿಣದ ರಾಜ್ಯಗಳಾದ ಕೇರಳ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಕೆಲ ದಿನಗಳಿಂದ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ನಡೆಯುತ್ತಿದೆ. ಈ ಮೂರೂ ರಾಜ್ಯಗಳಲ್ಲಿ ಆಡಳಿತರೂಢ ಪಕ್ಷಗಳು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.