ನವದೆಹಲಿ: ತಿದ್ದುಪಡಿಯಾಗಿದ್ದ ಮೂರು ಕೃಷಿ ಕಾಯ್ದೆಗಳನ್ನು ಕೈಬಿಡುವ ಕೇಂದ್ರದ ನಿರ್ಧಾರದ ಹಿನ್ನೆಲೆಯಲ್ಲಿ ನ.20 ಅನ್ನು ‘ಕಿಸಾನ್ ವಿಜಯ್ ದಿವಸ್’ ಆಗಿ ಆಚರಿಸಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಆ ದಿನ ದೇಶದಾದ್ಯಂತ ವಿಜಯೋತ್ಸವ ರ್ಯಾಲಿಗಳನ್ನು ಆಯೋಜಿಸಲಿದೆ.
ಸುದೀರ್ಘ ಕಾಲ ನಡೆದ ಪ್ರತಿಭಟನೆಯ ಅವಧಿಯಲ್ಲಿ ಮೃತಪಟ್ಟಿದ್ದ ಸುಮಾರು 700 ಮಂದಿ ರೈತರ ಕುಟುಂಬ ಸದಸ್ಯರನ್ನು ಪಕ್ಷದ ಮುಖಂಡರು ಭೇಟಿಯಾಗಲಿದ್ದು, ಹುತಾತ್ಮ ರೈತರಿಗೆ ಗೌರವವನ್ನು ಸಲ್ಲಿಸಲು ಆ ದಿನ ಮೇಣದ ಬತ್ತಿ ಜಾಥಾವನ್ನೂ ನಡೆಸಲಾಗುತ್ತದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಈ ಕುರಿತು ಪಕ್ಷದ ರಾಜ್ಯ ಘಟಕಗಳಿಗೆ ಪತ್ರ ಬರೆದಿದ್ದಾರೆ. ಆ ದಿನ ನಿಗದಿಯಂತೆ ರಾಜ್ಯ, ಜಿಲ್ಲಾ, ಬ್ಲಾಕ್ ಮಟ್ಟದಲ್ಲಿ ವಿಜಯೋತ್ಸವ ರ್ಯಾಲಿ, ಮೇಣದ ಬತ್ತಿ ಜಾಥಾ ಆಯೋಜಿಸಬೇಕು ಎಂದು ಸೂಚಿಸಿದ್ದಾರೆ.