ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಚಿಂತನ ಶಿಬಿರದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಿವು...

Last Updated 15 ಮೇ 2022, 13:51 IST
ಅಕ್ಷರ ಗಾತ್ರ

ಉದಯಪುರ: ಸಾಂಸ್ಥಿಕ ಸುಧಾರಣೆಗಾಗಿ ಪಕ್ಷದಲ್ಲಿ ಮಹತ್ವದ ಬದಲಾವಣೆ ತರುವುದಾಗಿ ಕಾಂಗ್ರೆಸ್‌ ಭಾನುವಾರ ಪ್ರಕಟಿಸಿದೆ.

50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ, 'ಒಬ್ಬ ವ್ಯಕ್ತಿ, ಒಂದೇ ಹುದ್ದೆ', 'ಒಂದು ಕುಟುಂಬ, ಒಂದೇ ಟಿಕೆಟ್‌' ನೀತಿ ಜಾರಿಗೊಳಿಸಲು ಒತ್ತು ನೀಡುವ ಮೂಲಕ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸನ್ನದ್ದುಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

'ನವ ಸಂಕಲ್ಪ ಚಿಂತನ ಶಿಬಿರ'ದ ಸಮಾಲೋಚನೆಯ ನಂತರ ಕಾಂಗ್ರೆಸ್‌ ಮೂರು ವಿಭಾಗಗಳನ್ನು ರಚಿಸಲು ನಿರ್ಧರಿಸಿದೆ. ‘ಸಾರ್ವಜನಿಕ ಒಳನೋಟ’, ‘ಚುನಾವಣಾ ನಿರ್ವಹಣೆ’ ಮತ್ತು ‘ರಾಷ್ಟ್ರೀಯ ತರಬೇತಿ’ ಎಂಬುದು ಆ ವಿಭಾಗಗಳಾಗಿವೆ.

‘ಒಂದು ಕುಟುಂಬ, ಒಂದೇ ಟಿಕೆಟ್’ ನಿಯಮವನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿದೆ. ಆದರೆ ಕುಟುಂಬದ ಮತ್ತೊಬ್ಬ ಸದಸ್ಯರು ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಕೆಲಸ ಮಾಡಿದ್ದರೆ ಅವರನ್ನು ಪರಿಗಣಿಸುವುದಾಗಿ ಹೇಳಿದೆ.

ಯಾವುದೇ ವ್ಯಕ್ತಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಪಕ್ಷದ ಸ್ಥಾನವನ್ನು ಹೊಂದಿರಬಾರದು ಎಂಬ ನೀತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.

50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ಪಕ್ಷದ ಸಂಘಟನೆಯ ಎಲ್ಲಾ ಹಂತಗಳಲ್ಲಿ ಶೇಕಡಾ 50 ರಷ್ಟು ಪ್ರಾತಿನಿಧ್ಯವನ್ನು ನೀಡಲು ಪಕ್ಷವು ನಿರ್ಧರಿಸಿದೆ.

ರಾಜಕೀಯ ಸವಾಲುಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಿದ್ದಾರೆ ಎಂದು ಪ್ರಕಟಿಸಲಾಗಿದೆ.

ಸಮಾರೋಪ ಭಾಷಣದಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಾಂಸ್ಥಿಕ ಸುಧಾರಣೆಗಾಗಿ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಘೋಷಿಸಿದರು.

ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿಯಂದು ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ (ಸಂಪರ್ಕ) ಯಾತ್ರೆ'ಯನ್ನು ಪ್ರಾರಂಭಿಸಲಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಎರಡನೇ ಹಂತದ 'ಜನ ಜಾಗರಣ ಯಾತ್ರೆ'ಯನ್ನು ಜೂನ್ 15 ರಿಂದ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಕಳೆದ ಹಲವು ವರ್ಷಗಳಲ್ಲಿ ಪಕ್ಷ ಎದುರಿಸಿದ ಚುನಾವಣಾ ಸೋಲು ಮತ್ತು ಭಿನ್ನಾಭಿಪ್ರಾಯಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಮೂರು ದಿನಗಳ ‘ನವ ಸಂಕಲ್ಪ ಚಿಂತನ ಶಿಬಿರ’ವನ್ನು ರಾಜಸ್ಥಾನದ ಉದಯಪುರದಲ್ಲಿ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT