ತಿರುವನಂತಪುರ: ಓಣಂ ಹಬ್ಬದ ಪ್ರಯುಕ್ತ ಕೇರಳದಲ್ಲಿ ವರ್ಷಂಪ್ರತಿ ಆಯೋಜನೆಯಾಗುತ್ತಿರುವ ನೆಹರೂ ಟ್ರೋಫಿ ದೋಣಿ ಸ್ಪರ್ಧೆಗೆ ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೇರಳ ಸರ್ಕಾರವು ಆಹ್ವಾನ ನೀಡಿದೆ.
ಇದು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಹಾಗೂ ಕೋಮುವಾದಿ ಶಕ್ತಿಗಳ ಮೇಲೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಇರುವ ನಿಷ್ಠೆಯನ್ನು ತೋರಲು ಆಹ್ವಾನ ನೀಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸುಧಾಕರನ್ ಆರೋಪಿಸಿದ್ದಾರೆ.
ಅಮಿತ್ ಶಾ ಅವರನ್ನು ಆಹ್ವಾನಿಸಲು ಲಾವ್ಲಿನ್ ಅಥವಾ ಚಿನ್ನ ಹಗರಣ ಕಾರಣವೇ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಬೇಕು ಎಂದು ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ವಾಗ್ದಾಳಿ ನಡೆಸಿದ್ದಾರೆ.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇರಳ ಸರ್ಕಾರವು, ದಕ್ಷಿಣದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿದೆ. ಅವರೆಲ್ಲರೂ ಸೆಪ್ಟೆಂಬರ್ 3ರಂದು ನಡೆಯಲಿರುವ 30ನೇ ದಕ್ಷಿಣ ವಲಯ ಕೌನ್ಸಿಲ್ ಸಭೆಯಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ ಎಂದು ತಿಳಿಸಿದೆ.
ಆಲಪ್ಪುಳದ ಪುನ್ನಮಡ ಹಿನ್ನೀರಿನಲ್ಲಿ ವರ್ಣರಂಜಿತ ದೋಣಿ ಸ್ಪರ್ಧೆಯು ಸೆಪ್ಟೆಂಬರ್ 4ರಂದು ನಡೆಯಲಿದೆ.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ 1952ರಲ್ಲಿ ಕೇರಳಕ್ಕೆ ತನ್ನ ಮೊದಲ ಭೇಟಿಯ ವೇಳೆ ಭಾರತದ ಮೊದಲ ಪ್ರಧಾನಿ ಜವಹರಲಾಲ್ ನೆಹರೂ ಕುಟ್ಟನಾಡ್ಗೆ ಭೇಟಿ ನೀಡಿದ ನೆನಪಿಗಾಗಿ ಈ ದೋಣಿ ಸ್ಪರ್ಧೆಗೆ ನೆಹರೂ ಅವರ ಹೆಸರನ್ನು ಇರಿಸಲಾಗಿದೆ.