ನವದೆಹಲಿ: ನಿರ್ದಿಷ್ಟ ದಾಳಿ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಪ್ರಸ್ತಾಪಿಸಿ, ಬಿಜೆಪಿ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್, ದೇಶದ ಭದ್ರತೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ.
ಇದು ದುರಾದೃಷ್ಟಕರ ಸಂಗತಿ, ಇದಕ್ಕಾಗಿ ಕಾಂಗ್ರೆಸ್ ಪಕ್ಷದ ನಾಯಕರು ಕ್ಷೆಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು. ಇಂತಹ ಹೇಳಿಕೆಗಳನ್ನು ನೀಡಿ ದೇಶ ಒಡೆಯುವ ಕೆಲಸ ಮಾಡುವವರಿಗೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ಬೆಂಬಲವಿದೆ ಎಂದು ಆರೋಪಿಸಿದರು.
ಬಾತ್ಲಾ ಹೌಸ್ ಎನ್ಕೌಂಟರ್ ಬಗ್ಗೆ ಎತ್ತಿರುವ ದಿಗ್ವಿಜಯ್ ಸಿಂಗ್ ಸಾಮಾನ್ಯ ನಾಯಕರಲ್ಲ, ಅವರು ಮಧ್ಯಪ್ರದೇಶದಲ್ಲಿ 10 ವರ್ಷ ಮುಖ್ಯಮಂತ್ರಿಯಾಗಿದ್ದರು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು ಎಂದು ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
ಭಾರತ್ ಜೋಡೊ ಯಾತ್ರೆಯ ಅಂಗವಾಗಿ ಜಮ್ಮುವಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ದಿಗ್ವಿಜಯ ಸಿಂಗ್ ಅವರು ನಿರ್ದಿಷ್ಟ ದಾಳಿಯನ್ನು ಪ್ರಶ್ನಿಸಿದ್ದರು.
ನಿರ್ದಿಷ್ಟ ದಾಳಿ ಬಗ್ಗೆ ಸಶಸ್ತ್ರ ಪಡೆಗಳು ಯಾವುದೇ ಪುರಾವೆ ನೀಡುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ದಿಗ್ವಿಜಯ್ ಸಿಂಗ್ ನೀಡಿರುವ ಹೇಳಿಕೆಯನ್ನು ನಾನಾಗಲಿ, ಪಕ್ಷವಾಗಲಿ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.