ಪಣಜಿ: ಕಾಂಗ್ರೆಸ್ ನಾಯಕರು ಭಾರತದ ಚಕ್ರವರ್ತಿಗಳಲ್ಲ, ಅವರು ಕುದುರೆಯಿಂದ ಕೆಳಗಿಳಿಯಬೇಕು ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಯೊಯಿತ್ರಾ ಅವರು ಗುರುವಾರ ವಾಗ್ದಾಳಿ ನಡೆಸಿದ್ದಾರೆ.
ಗೋವಾದಲ್ಲಿ ಮಾತನಾಡಿರುವ ಅವರು, ‘ಕಾಂಗ್ರೆಸ್ ನಾಯಕರು ‘ಭಾರತದ ಚಕ್ರವರ್ತಿ’ಗಳಲ್ಲ. ಅದನ್ನು ಅವರು ಅರ್ಥಮಾಡಿಕೊಳ್ಳಬೇಕು. ಗೋವಾದಲ್ಲಿ ಕಾಂಗ್ರೆಸ್ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿದ್ದಿದ್ದರೆ, ಬಿಜೆಪಿಯನ್ನು ಸೋಲಿಸಲು ಟಿಎಂಸಿ ಇಲ್ಲಿಗೆ ಬರುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಹೇಳಿದರು.
ಗೋವಾದಲ್ಲಿ ಮೈತ್ರಿಗೆ ಟಿಎಂಸಿ ಸಿದ್ಧವಾಗಿದೆ. ಏಕೆಂದರೆ ಬಿಜೆಪಿಯನ್ನು ಸೋಲಿಸುವುದು ಈ ಹೊತ್ತಿನ ಅಗತ್ಯ. ಆದರೆ ಕಾಂಗ್ರೆಸ್ ತನ್ನ ಕುದುರೆ ಮೇಲಿಂದ ಕೆಳಗೆ ಇಳಿಯಬೇಕು. ತನ್ನ ಶಕ್ತಿ ಕ್ಷೀಣಿಸಿರುವುದನ್ನು ಆ ಪಕ್ಷ ಅರಿಯಬೇಕು ಎಂದು ಗೇಲಿ ಮಾಡಿದರು.
‘ಗೋವಾದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ. ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಟಿಎಂಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಅದು ಅಲ್ಪ ಸ್ವಲ್ಪ ಮತಗಳಿಗೆಗಷ್ಟೇ’ ಎಂದು ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಗುರುವಾರ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮಹುವಾ ಮೊಯಿತ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.