ನವದೆಹಲಿ: ‘ರಾಷ್ಟ್ರೀಯ ಹಿತಾಸಕ್ತಿ’ ಕಾರಣಗಳಿಂದಾಗಿ ಭಾರತವು ರಷ್ಯಾದಿಂದ ಇಂಧನ ಹಾಗೂ ಮಿಲಿಟರಿ ಯಂತ್ರಾಂಶಗಳ ಆಮದನ್ನು ಮುಂದುವರಿಸಲಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಲೋಕಸಭೆಯಲ್ಲಿ ಬುಧವಾರ ಹೇಳಿದರು.
ಉಕ್ರೇನ್ ಮೇಲಿನ ಯುದ್ಧ ಕಾರಣಗಳಿಂದಾಗಿ ರಷ್ಯಾ ಮೇಲೆ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿವೆ. ಆದಾಗ್ಯೂ, ರಷ್ಯಾದಿಂದ ಆಮದು ಮುಂದುವರಿಯಲಿದೆ ಎಂದು ಅವರು ಸದನಕ್ಕೆ ತಿಳಿಸಿದರು.
‘ಇಂಧನ ದರಗಳಲ್ಲಿ ಈಗಾಗಲೇ ಹೆಚ್ಚಳವಾಗಿದೆ. ಸಾಮಾನ್ಯ ಜನರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ನೋಡಿಕೊಳ್ಳಬೇಕಿದೆ. ಅದೇ ರೀತಿ ರಸಗೊಬ್ಬರಗಳ ಬೆಲೆಗಳ ಹೆಚ್ಚಳ ಕೂಡ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದರು.