ಮುಂಬೈ: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರನ್ನು ಸಿಬಿಐ ದೋಷಮುಕ್ತಗೊಳಿಸಿದೆ ಎನ್ನಲಾದ ವರದಿಗಳು ಪ್ರಕಟವಾಗಿದ್ದು ವಿವಾದಕ್ಕೀಡಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಐ ‘ದೇಶಮುಖ್ ಅವರ ವಿರುದ್ಧದ ಆರೋಪಗಳ ಬಗ್ಗೆ ನಡೆಯುತ್ತಿರುವ ತನಿಖೆ ಪ್ರಗತಿಯಲ್ಲಿದೆ. ದೇಶಮುಖ್ ಅವರಿಗೆ ಕ್ಲೀನ್ಚಿಟ್ ನೀಡಿಲ್ಲ’ ಎಂದು ತಿಳಿಸಿದೆ.
‘2021ರ ಏಪ್ರಿಲ್ 21ರಂದು ದಾಖಲಿಸಿರುವ ಎಫ್ಐಆರ್ ಸಿಬಿಐ ವೆಬ್ಸೈಟ್ನಲ್ಲಿ ಈಗಲೂ ಲಭ್ಯವಿದೆ’ ಎಂದು ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಎನ್ಸಿಪಿ ವಕ್ತಾರ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲೀಕ್, ‘ಇದು ರಾಜಕೀಯ ದ್ವೇಷ ತೀರಿಸಿಕೊಳ್ಳುತ್ತಿರುವುದನ್ನು ತೋರಿಸುತ್ತದೆ ಮತ್ತು ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ’ ಎಂದು ದೂರಿದ್ದಾರೆ.
‘ಈ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ತನಿಖೆಯಾಗಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಪ್ರತಿ ತಿಂಗಳು ₹100 ಕೋಟಿ ವಸೂಲಿ ಮಾಡಿಕೊಡುವ ಗುರಿಯನ್ನು ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ ಸಚಿನ್ ವಾಜೆ ಅವರಿಗೆ ಅನಿಲ್ ದೇಶಮುಖ್ ನೀಡಿದ್ದರು ಎಂದು ಮುಂಬೈನ ಮಾಜಿ ಪೊಲೀಸ್ ಕಮಿಷನರ್ ಮತ್ತು ಹಾಲಿ ಗೃಹ ರಕ್ಷಕ ದಳದ ಕಮಾಂಡಂಟ್ ಜನರಲ್ ಪರಮ್ ಬೀರ್ ಸಿಂಗ್ ಆರೋಪಿಸಿದ್ದರು.