ನವದೆಹಲಿ: ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಮೊಹಲ್ಲಾ ಕ್ಲಿನಿಕ್ ಮಾದರಿಯನ್ನು ಪರಿಚಯಿಸಿದ್ದಕ್ಕಾಗಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಬೇಕು ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
‘ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿಶ್ವದ ಜನರು ಭೇಟಿ ನೀಡುತ್ತಿರುವ ಮೊಹಲ್ಲಾ ಕ್ಲಿನಿಕ್ನ ಮಾದರಿಯನ್ನು ನೀಡಿದ್ದಕ್ಕಾಗಿ ದೇಶವು ಜೈನ್ ಅವರ ಬಗ್ಗೆ ಹೆಮ್ಮೆ ಪಡಬೇಕು. ಅವರಿಗೆ ಪದ್ಮಭೂಷಣ ಅಥವಾ ಪದ್ಮವಿಭೂಷಣದಂತಹ ಉನ್ನತ ಪ್ರಶಸ್ತಿಗಳನ್ನು ನೀಡಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಕೇಜ್ರಿವಾಲ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಜೈನ್ ಅವರನ್ನು ‘ಅತ್ಯಂತ ಪ್ರಾಮಾಣಿಕ ಮತ್ತು ದೇಶಭಕ್ತ’ ಎಂದು ಸಮರ್ಥಿಸಿಕೊಂಡ ಕೇಜ್ರಿವಾಲ್, ‘ಜೈನ್ ಅವರು ಸುಳ್ಳು ಪ್ರಕರಣದಲ್ಲಿ ಸಿಲುಕಿದ್ದಾರೆ. ಅವರಿಗೆ ಸಿಬಿಐ ಕ್ಲೀನ್ಚಿಟ್ ನೀಡಿದೆ. ಈಗ ಇ.ಡಿ ತನಿಖೆಯ ಬಳಿಕ ಅವರು ಹೊರಬರುವ ನಂಬಿಕೆ ಇದೆ’ ಎಂದು ಆಶಯ ವ್ಯಕ್ತಪಡಿಸಿದರು.
ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿಯಿಂದ ಬಂಧಿತರಾಗಿರುವ ಸತ್ಯೇಂದ್ರ ಜೈನ್ ಅವರು, ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ, ವಿದ್ಯುತ್ ಮತ್ತು ಗೃಹ ಸೇರಿದಂತೆ ವಿವಿಧ ಖಾತೆಗಳ ಸಚಿವರಾಗಿದ್ದಾರೆ.