ನವದೆಹಲಿ: ಕೋವಿಡ್ ಸೋಂಕಿತರಿಗೆ ಅಗತ್ಯವಿರುವ ವೈದ್ಯಕೀಯ ಆಮ್ಲಜನಕ(ಆಕ್ಸಿಜನ್) ಮತ್ತು ರೆಮ್ಡಿಸಿವಿರ್ ಔಷಧಗಳ ಕೊರತೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ಇವುಗಳ ಪೂರೈಕೆ ಮೇಲೆ ನಿಗಾವಹಿಸುವುದಕ್ಕಾಗಿ ದೆಹಲಿ ಸರ್ಕಾರ ಅಧಿಕಾರಿಗಳ ಎರಡು ತಂಡಗಳನ್ನು ರಚಿಸಿದೆ.
ದೆಹಲಿಯಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯ ಜೊತೆ ಜತೆಗೆ, ಸೋಂಕಿತರಿಗೆ ಚಿಕಿತ್ಸೆಗೆ ಅಗತ್ಯವಾದ ವೈದ್ಯಕೀಯ ಆಮ್ಲಜನಕ ಪೂರೈಕೆ ಮತ್ತು ರೆಮ್ಡಿಸಿವಿರ್ ಚುಚ್ಚು ಮದ್ದುಗಳ ಕೊರತೆಯೂ ಕಾಣಿಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕಗಳ ಬಳಿ 9 ಅಧಿಕಾರಿಗಳನ್ನೊಳಗೊಂಡ ತಂಡವನ್ನು ನಿಯೋಜಿಸಿದೆ. ಈ ತಂಡ, ಆಮ್ಲನಜಕದ ಪೂರೈಕೆ ಪ್ರಮಾಣವನ್ನು ಉಸ್ತುವಾರಿ ಮಾಡುತ್ತದೆ. ಜತೆಗೆ, ದೆಹಲಿಯಲ್ಲಿರುವ ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯ ಮೇಲೂ ನಿಗಾ ಇಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ... ಕೋವಿಡ್ ಹೆಚ್ಚಳ: ದೆಹಲಿಯಲ್ಲಿ ಆರು ದಿನ ಸಂಪೂರ್ಣ ಲಾಕ್ಡೌನ್
ಇದೇ ರೀತಿ ರೆಮ್ಡಿಸಿವಿರ್ ಚುಚ್ಚುಮದ್ದುಗಳ ಪೂರೈಕೆಯ ಉಸ್ತುವಾರಿಗಾಗಿ ಸರ್ಕಾರ 28 ಔಷಧ ಪರಿವೀಕ್ಷಕರನ್ನು ನಿಯೋಜಿಸಿ ಆದೇಶ ಹೊರಡಿಸಿದೆ. ‘ಈ ಪರಿವೀಕ್ಷಕರು ರೆಮ್ಡಿಸಿವಿರ್ ಇಂಜೆಕ್ಷನ್ ಖರೀದಿ ಪ್ರಕ್ರಿಯೆ, ಬೇಡಿಕೆ ಮತ್ತು ಪೂರೈಕೆಯ ಮೇಲೂ ನಿಗಾ ಇಡಲಿದ್ದಾರೆ. ಕಂಪನಿಗಳಿಂದ ಪೂರೈಕೆದಾರ ಅಥವಾ ಡೀಲರ್ ಜತೆಗಿನ ವ್ಯವಹಾರದ ಮೇಲೂ ನಿಗಾವಹಿಸಲಿದ್ದಾರೆ‘ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ 25,462 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿವೆ.
ಇದನ್ನೂ ಓದಿ... ಔಷಧ ಕಂಪನಿ ಅಧಿಕಾರಿ ವಿಚಾರಣೆಗೆ ಬಿಜೆಪಿ ಆಕ್ಷೇಪ: ಶಿವಸೇನಾ ಖಂಡನೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.