ನವದೆಹಲಿ: ಕೋವಿಡ್ ಪರಿಸ್ಥಿತಿಯ ಬಗ್ಗೆ ದೆಹಲಿ ಸರ್ಕಾರ ನಿಗಾ ವಹಿಸಿದೆ. ಹೊಸ ರೂಪಾಂತರ ತಳಿ ಪತ್ತೆಯಾಗುವವರೆಗೂ ಕಳವಳಪಡುವ ಯಾವುದೇ ಕಾರಣವಿಲ್ಲ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಸೋಮವಾರ ಹೇಳಿದ್ದಾರೆ.
‘ದೆಹಲಿಯಲ್ಲಿ 100–200ರ ಒಳಗೆ ದೈನಂದಿನ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗೆ ದಾಖಲಾಗುವವರ ಬಗ್ಗೆ ನಾವು ನಿಗಾ ವಹಿಸಿದ್ದೇವೆ. ಕೋವಿಡ್ ರೋಗಿಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ’ ಎಂದು ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಕೋವಿಡ್ನ ರೂಪಾಂತರ ತಳಿಯ ಭೀತಿಯ ಮಧ್ಯೆ ಸಚಿವ ಸತ್ಯೇಂದ್ರ ಜೈನ್ ಈ ಹೇಳಿಕೆ ನೀಡಿದ್ದಾರೆ.ದೆಹಲಿಯಲ್ಲಿ ಭಾನುವಾರ 141 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದ್ದು ಒಂದು ಸಾವು ವರದಿಯಾಗಿದೆ.
‘ದೆಹಲಿ ಸರ್ಕಾರವು ಕೋವಿಡ್ ಸ್ಥಿತಿಯ ಬಗ್ಗೆ ನಿಗಾ ವಹಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯು ಯಾವುದೇ ಹೊಸ ರೂಪಾಂತರ ತಳಿಯ ಬಗ್ಗೆ ಘೋಷಣೆ ಮಾಡಿಲ್ಲ. ಆದ್ದರಿಂದ ಕಳವಳಪಡುವ ಯಾವುದೇ ಕಾರಣವಿಲ್ಲ’ ಎಂದು ಅವರು ಹೇಳಿದರು.
ಜಿನೋಮಿಕ್ ಸಂಸ್ಥೆಯು ಗುಜರಾತ್ನಲ್ಲಿ ಕೋವಿಡ್ನ ಎಕ್ಸ್ಇ ರೂಪಾಂತರ ತಳಿಯನ್ನು ಪತ್ತೆ ಹಚ್ಚಿದೆ. ಅದು ಇನ್ನೂ ಪರೀಕ್ಷೆಯ ಹಂತದಲ್ಲಿದ್ದು ಫಲಿತಾಂಶ ಶೀಘ್ರ ಬರುವ ನಿರೀಕ್ಷೆಯಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ಶನಿವಾರ ಹೇಳಿದ್ದವು.