ಕಣ್ಣೂರು (ಕೇರಳ): ಉತ್ತರ ಕೇರಳದ ಕಣ್ಣೂರಿನಲ್ಲಿ ಸೋಮವಾರ ಮುಂಜಾನೆ ಸಿಪಿಐ(ಎಂ) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೀನುಗಾರರಾಗಿದ್ದ ಹರಿದಾಸನ್ ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ನ್ಯೂ ಮಾಹೆ ಪಟ್ಟಣದ ಬಳಿಯ ಪುನ್ನೋಲ್ನಲ್ಲಿನ ಅವರ ಮನೆಯ ಮುಂದೆಯೇ ದುಷ್ಕರ್ಮಿಗಳ ತಂಡವೊಂದು ಹಲ್ಲೆ ನಡೆಸಿದೆ ಎಂದು ಹೇಳಿದ್ದಾರೆ.
ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಆಗಮಿಸಿದ ನೆರೆಹೊರೆಯವರು 54 ವರ್ಷದ ವ್ಯಕ್ತಿಯನ್ನು ತಲಶ್ಶೇರಿಯ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದು, ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವಾರದ ಹಿಂದಷ್ಟೇ ಪುನ್ನೋಲ್ ಪ್ರದೇಶದಲ್ಲಿ ಸಿಪಿಐ(ಎಂ) ಮತ್ತು ಬಿಜೆಪಿ ನಡುವೆ ಘರ್ಷಣೆ ನಡೆದಿತ್ತು. ಆರ್ಎಸ್ಎಸ್-ಬಿಜೆಪಿಯ ಗುಂಪೊಂದು ಪಕ್ಷದ ಕಾರ್ಯಕರ್ತನನ್ನು ಕೊಂದಿದೆ ಎಂದು ಸಿಪಿಐ(ಎಂ) ಆರೋಪಿಸಿದೆ. ಬಿಜೆಪಿ ಈ ಆರೋಪಗಳನ್ನು ತಳ್ಳಿಹಾಕಿದೆ.
'ಹರಿದಾಸನ್ ಅವರನ್ನು ಕೊಂದೇ ತೀರುವ ಉದ್ದೇಶ ಹೊಂದಿದ್ದ 'ಆರ್ಎಸ್ಎಸ್ ಕಾರ್ಯಕರ್ತರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಹಲವಾರು ಬಾರಿ ಹಲ್ಲೆ ನಡೆಸುವುದಲ್ಲದೆ ಅವರ ಒಂದು ಕಾಲನ್ನು ಕತ್ತರಿಸಿದ್ದಾರೆ' ಎಂದು ಸಿಪಿಐ(ಎಂ) ಆರೋಪಿಸಿದೆ.
ಈ ಆರೋಪದ ಬಗ್ಗೆ ಆರ್ಎಸ್ಎಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹತ್ಯೆಯನ್ನು ಖಂಡಿಸಿರುವ ಸಿಪಿಐ(ಎಂ) ತಲಶ್ಶೇರಿ ಪುರಸಭೆ ಮತ್ತು ನ್ಯೂ ಮಾಹೆ ಪಂಚಾಯತ್ನಲ್ಲಿ ಇಂದು ಹರತಾಳಕ್ಕೆ ಕರೆ ನೀಡಿದೆ.