ಅಹಮದಾಬಾದ್: ನಗರ ಕೇಂದ್ರಲ್ಲಿರುವ ಕೊಚ್ರಾಬ್ ಗ್ರಾಮದಲ್ಲಿ ತಲೆ ಎತ್ತಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಹೊಸ ಆಕರ್ಷಣೆಯಾಗಿ ಕಂಗೊಳಿಸುತ್ತಿದೆ. ಜತೆಗೆ ಕುತೂಹಲಕ್ಕೂ ಕಾರಣವಾಗಿದೆ.
ಈ ಪ್ರತಿಮೆ ಸ್ಥಾಪಿಸಿರುವುದು ರಾಜಕೀಯ ನಾಯಕರು ಅಥವಾ ಪುರಸಭೆ ಆಡಳಿತವಲ್ಲ. ದಲಿತ ಮಹಿಳೆಯೊಬ್ಬರು ತಾನು 15 ವರ್ಷಗಳಿಂದ ಕೂಡಿಟ್ಟ ಉಳಿತಾಯದ ಹಣದಲ್ಲಿ ತಮ್ಮ ಮನೆ ಬಳಿಯೇ, ಹನುಮಾನ್ ದೇವಸ್ಥಾನದ ಪಕ್ಕದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿ, ಎಲ್ಲರ ಗಮನ ಸೆಳೆದಿದ್ದಾರೆ.
68 ವರ್ಷದ ನಂದಾಬೆನ್ ಚೌಹಾಣ್ ಅವರು ಪುರಸಭೆಯಿಂದ ಖರೀದಿಸುವ ಮರಗಳನ್ನು ಮಾರಾಟ ಮಾಡುವ ಮೂಲಕ ಜೀವನೋಪಾಯ ನಡೆಸುತ್ತಿದ್ದಾರೆ. ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಿದ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿರುವ ನಂದಾಬೆನ್ ‘ಹನುಮಾನ್ ದೇವರಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಕೂಡ ನಮ್ಮ ಪಾಲಿಗೆ ದೇವರು’ ಎಂದಿದ್ದಾರೆ.
‘ಈ ಪ್ರತಿಮೆ ನಿರ್ಮಿಸಲು ನಾನು ವಿನಿಯೋಗಿಸಿರುವ ಮೊತ್ತದ ಬಗ್ಗೆ ಹೇಳಲಾರೆ. ಆದರೆ, ಕಳೆದ 14-15 ವರ್ಷಗಳಿಂದ ಬಾಬಾ ಸಾಹೇಬರಿಗೆ ಗೌರವ ಸಲ್ಲಿಸಲು ಹಣ ಉಳಿತಾಯ ಮಾಡುತ್ತಿದ್ದೆ. ಬಾಬಾ ಸಾಹೇಬ್ ಜೀ ಅವರು ನನ್ನ ಸಮುದಾಯ ಸೇರಿದಂತೆ ಎಲ್ಲ ಜನರ ಏಳಿಗೆಗೆ ಶ್ರಮಿಸಿದ್ದಾರೆ. ಅವರ ನೆನಪಿನಾರ್ಥ ಏನನ್ನಾದರೂ ಮಾಡಬೇಕೆಂಬುದು ನನ್ನ ಬಾಲ್ಯದ ಆಸೆಯಾಗಿತ್ತು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.