ಠಾಣೆ: ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಶನಿವಾರ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಸ್ಥಳೀಯ ಕೋರ್ಟ್ ವಿನಾಯಿತಿ ನೀಡಿದೆ.
‘ಅರ್ಜಿ ವಿಚಾರಣೆ ನಡೆಸಿದ ಭಿವಂಡಿ ನ್ಯಾಯಾಲಯದ ಪ್ರಥಮ ದರ್ಜೆ ನ್ಯಾಯಾಧೀಶ ಎಲ್.ಸಿ.ವಾಡಿಕರ್ ಅವರು, ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿದ ಮನವಿಯನ್ನು ಪುರಸ್ಕರಿಸಿದರು. ವಿಚಾರಣೆಯನ್ನು ಆಗಸ್ಟ್ 6ಕ್ಕೆ ಮುಂದೂಡಿದರು’ ಎಂದು ರಾಹುಲ್ ಗಾಂಧಿ ಪರ ವಕೀಲ ನಾರಾಯಣ ಅಯ್ಯರ್ ತಿಳಿಸಿದ್ದಾರೆ.
‘ನನ್ನ ತಾಯಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕಾರಣದಿಂದಾಗಿ ಕೋರ್ಟ್ಗೆ ಶನಿವಾರ ಹಾಜರಾಗಲು ಆಗುವುದಿಲ್ಲ. ಹೀಗಾಗಿ ವಿನಾಯಿತಿ ನೀಡಬೇಕು’ ಎಂದು ಅವರು ಅರ್ಜಿ ಸಲ್ಲಿಸಿದ್ದರು.
‘ಬಿದ್ದ ಪರಿಣಾಮ ನನ್ನ ಕಾಲು ಮುರಿದಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡಬೇಕು’ ಎಂದು ಕೋರಿ, ದೂರುದಾರರಾದ ರಾಜೇಶ್ ಕುಂಟೆ ಅವರೂ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿತು.