ನವದೆಹಲಿ: ವಕೀಲರಿಗೆ ವಿಮಾ ಭದ್ರತೆ ಒದಗಿಸಲು ₹ 40 ಕೋಟಿ ಒದಗಿಸುವ ಪ್ರಸ್ತಾವಕ್ಕೆ ದೆಹಲಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ₹ 5 ಲಕ್ಷ ಮೌಲ್ಯದ ವೈದ್ಯಕೀಯ ವಿಮೆ ಮತ್ತು ₹ 10 ಲಕ್ಷ ಮೌಲ್ಯದ ನಿಶ್ಚಿತ ವಿಮೆ ಒದಗಿಸುವುದು ಇದರ ಉದ್ದೇಶ.
ದೆಹಲಿಯಲ್ಲಿ ವಾಸವಿರುವ ವಕೀಲರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ. ಮುಖ್ಯಮಂತ್ರಿಗಳ ವಕೀಲರ ಕಲ್ಯಾಣ ಯೋಜನೆಯಡಿ ವಿಮೆ ಭದ್ರತೆ ಒದಗಿಸಲಾಗುವುದು ಎಂದು ಕಾನೂನುಸಚಿವ ಕೈಲಾಶ್ ಗೆಹ್ಲೋಟ್ ಶುಕ್ರವಾರ ತಿಳಿಸಿದರು.
ಮುಖ್ಯಮಂತ್ರಿ ಅವರು ಕಳೆದ ಬಜೆಟ್ನಲ್ಲಿ ಈ ಯೋಜನೆಗಾಗಿ ₹ 50 ಕೋಟಿ ಒದಗಿಸುವ ಭರವಸೆ ನೀಡಿದ್ದರು. ಯೋಜನೆ ಅನುಷ್ಠಾನದ ಅಂತಿಮ ಹೆಜ್ಜೆಯಾಗಿ ದೆಹಲಿ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ವಿವರಿಸಿದರು.
ಸುಪ್ರೀಂ ಕೋರ್ಟ್ನ ವಕೀಲರ ಸಂಘದ ಅಧ್ಯಕ್ಷ ರಾಕೇಶ್ ಕುಮಾರ್ ಖನ್ನಾ ಅವರ ಅಧ್ಯಕ್ಷತೆಯಲ್ಲಿ ಯೋಜನೆ ಜಾರಿ ಕುರಿತಂತೆ ಅಗತ್ಯ ಸಲಹೆ ನೀಡಲು ಕಳೆದ ವರ್ಷ 13 ಸದಸ್ಯರ ಸಮಿತಿಯನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರಚಿಸಿದ್ದರು.