ನವದೆಹಲಿ: ‘ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ದೆಹಲಿ ಸಚಿವ ಸತ್ಯೇಂದರ್ ಜೈನ್ ಅವರಿಗೆ ಉಪವಾಸದ ವೇಳೆ ನಿಗದಿತ ನಿಯಮಗಳಿಗೆ ಅನುಸಾರವಾಗಿ ಆಹಾರ ಪೂರೈಕೆ ಮಾಡಿ’ ಎಂದು ದೆಹಲಿ ಹೈಕೋರ್ಟ್ ಬುಧವಾರ ತಿಹಾರ್ ಜೈಲು ಆಡಳಿತಕ್ಕೆ ನಿರ್ದೇಶನ ನೀಡಿದೆ.
‘ತಾವು ಉಪವಾಸ ಆಚರಿಸುತ್ತಿರುವುದರಿಂದ ತಮ್ಮ ಧಾರ್ಮಿಕ ನಂಬಿಕೆಗೆ ಅನುಗುಣವಾಗಿ ಹಣ್ಣುಗಳು, ಒಣ ಹಣ್ಣುಗಳು ಹಾಗೂ ಖರ್ಜೂರದಂಥ ಆಹಾರ ಪೂರೈಸಲು ಜೈಲಿನ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಕೋರಿ ಸತ್ಯೇಂದರ್ ಅವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ತಿಹಾರ್ ಜೈಲಿನಲ್ಲಿರುವ ಸತ್ಯೇಂದರ್ ಜೈನ್ ಅವರ ಮತ್ತಷ್ಟು ವಿಡಿಯೊಗಳು ಬುಧವಾರ ಬಹಿರಂಗಗೊಂಡಿದ್ದು, ಇದರಲ್ಲಿ ಅವರು ಬೇಯಿಸದ ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುತ್ತಿರುವುದು ಸೆರೆಯಾಗಿದೆ.
8 ಕೆ.ಜಿ. ತೂಕ ಹೆಚ್ಚಳ: ‘ಜೈಲಿನಲ್ಲಿರುವುದರಿಂದ ಸತ್ಯೇಂದರ್ ಅವರ ದೇಹ ತೂಕ 28 ಕೆ.ಜಿಯಷ್ಟು ಇಳಿದಿದೆ ಎಂದು ಅವರ ವಕೀಲರು ಹೇಳಿದ್ದಾರೆ. ಆದರೆ ಸತ್ಯೇಂದರ್ ಅವರು 8 ಕೆ.ಜಿ. ತೂಕ ಹೆಚ್ಚಿಸಿಕೊಂಡಿದ್ದಾರೆ’ ಎಂದೂ ಮೂಲಗಳು ಹೇಳಿವೆ.