ನವದೆಹಲಿ:ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮುಂದಿನ 5 ದಿನ ತೀವ್ರ ಚಳಿಯೊಂದಿಗೆ ದಟ್ಟವಾದ ಮಂಜು ಆವರಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಪಂಜಾಬ್ನ ಹಲವು ಭಾಗಗಳಲ್ಲಿ ಹಾಗೂ ಹರಿಯಾಣ ಮತ್ತು ಚಂಡೀಗಢದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ತುಂಬುವ ಸಾಧ್ಯತೆಯಿದೆ. ಪಶ್ಚಿಮ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿಯೂ ತೀವ್ರ ಚಳಿಯ ಅನುಭವಾಗಲಿದೆ. ದೆಹಲಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್ಗೆ ಕುಸಿಯಲಿದೆ ಎಂದು ಇಲಾಖೆ ತಿಳಿಸಿದೆ.
ಭಾನುವಾರ ದೆಹಲಿಯಲ್ಲಿ ಕನಿಷ್ಠ ಉಷ್ಣಾಂಶ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಡಿ.27ರಂದು ಪಂಜಾಬ್ನಲ್ಲಿ ಹಿಮ ದಟ್ಟವಾಗಿರಲಿದೆ. ಮುಂದಿನ 3 ದಿನಗಳ ಕಾಲ ಹರಿಯಾಣ, ಚಂಡೀಗಢ ಮತ್ತು ಉತ್ತರ ಪ್ರದೇಶದಲ್ಲಿಯೂ ಇದೇ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಒಂದು ವಾರದಿಂದ ಉತ್ತರ ಭಾರತದಲ್ಲಿ ಕೊರೆಯುವ ಚಳಿಯಿಂದಾಗಿ ಮೂರು ಜನರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ. ಹಲವು ರಾಜ್ಯಗಳು ಬಸ್ಗಳ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಕೆಲವು ಪ್ರದೇಶಗಳಲ್ಲಿ ವೇಗದ ಮಿತಿಗಳನ್ನು ಕಡಿಮೆ ಮಾಡಲಾಗಿದೆ. ಶಾಲೆಯ ಸಮಯ ಬದಲಿಸಲಾಗಿದೆ.