ನವದೆಹಲಿ/ಬೀಜಿಂಗ್: ಘರ್ಷಣೆ ನಡೆದ ಎಲ್ಲ ಸ್ಥಳಗಳಿಂದಲೂ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮುಖ್ಯ. ಇಂಥ ಕ್ರಮದಿಂದ ಮಾತ್ರ ಉಭಯ ದೇಶಗಳ ಸೇನೆಗಳ ನಡುವಿನ ಸಂಘರ್ಷ ಶಮನಗೊಳಿಸಲು ಸಾಧ್ಯ ಎಂದು ಭಾರತ ಚೀನಾಕ್ಕೆ ಸ್ಪಷ್ಟವಾಗಿ ಹೇಳಿದೆ.
ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ದಿಯಾಗಲು ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ವಾತಾವರಣ ನಿರ್ಮಾಣವಾಗುವುದು ಸಹ ಅಷ್ಟೇ ಮುಖ್ಯ ಎಂದೂ ಭಾರತ ಪ್ರತಿಪಾದಿಸಿದೆ.
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗೆ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಗುರುವಾರ ದೂರವಾಣಿ ಮೂಲಕ 75 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ. ಈ ಕುರಿತ ವಿವರಗಳನ್ನು ವಿದೇಶಾಂಗ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದೆ.
ಗಡಿಯಲ್ಲಿನ ಸಂಘರ್ಷವು ಕಳೆದ ವರ್ಷ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದಾಗಿ ಜೈಶಂಕರ್ ಹೇಳಿದರು ಎಂದೂ ಸಚಿವಾಲಯ ತಿಳಿಸಿದೆ.
ಎರಡೂ ದೇಶಗಳ ಸೇನಾ ಕಮಾಂಡರ್ಗಳ ಮಟ್ಟದಲ್ಲಿ ಅನೇಕ ಸುತ್ತಿನ ಮಾತುಕತೆ ನಂತರ, ಪ್ಯಾಂಗ್ಯಾಂಗ್ ತ್ಸೊ ಸರೋವರದ ಉತ್ತರ ಹಾಗೂ ದಕ್ಷಿಣ ಭಾಗದಿಂದ ಸೇನೆಯನ್ನು ಹಿಂತೆಗೆಯಲು ಉಭಯ ದೇಶಗಳು ಸಮ್ಮತಿಸಿದ್ದವು.
ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ನಡೆದ ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ, ವಿಚಾರ ವಿನಿಮಯ ಹಾಗೂ ತ್ವರಿತ ಸಂಪರ್ಕಕ್ಕೆ ಹಾಟ್ಲೈನ್ ಸ್ಥಾಪಿಸಲು ಸಹ ಉಭಯ ಸಚಿವರು ಒಪ್ಪಿಗೆ ಸೂಚಿಸಿದರು ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.