ನವದೆಹಲಿ: ಯಶವಂತಪುರ–ಹುಬ್ಬಳ್ಳಿ ರೈಲು ಮಾರ್ಗವನ್ನು ಜೋಡಿ ಮಾರ್ಗವನ್ನಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿಯನ್ನು ಹಂತಹಂತವಾಗಿ ಕಾರ್ಯಗತಗೊಳಿಸಲಾಗುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ರಾಜ್ಯಸಭಾ ಸದಸ್ಯ ಕೆ.ನಾರಾಯಣ ಅವರ ಪ್ರಶ್ನೆಗೆ ಸಂಸತ್ನಲ್ಲಿ ಉತ್ತರಿಸಿದ ಅವರು, ಈ ಮಾರ್ಗದ ಪೈಕಿ ಚಿಕ್ಕಜಾಜೂರು–ಅರಸೀಕೆರೆ, ತುಮಕೂರು–ಯಶವಂತಪುರ ನಡುವೆ ಜೋಡಿ ಮಾರ್ಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಯಶವಂತಪುರ–ಚಿಕ್ಕಬಾಣಾವರ–ತುಮಕೂರು ನಡುವಿನ ಮಾರ್ಗದ ವಿದ್ಯುದೀಕರಣ ಕಾರ್ಯವು ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
‘ತುಮಕೂರು–ಯಶವಂತಪುರ ನಡುವೆ ಮೆಮು ರೈಲು ಓಡಿಸುವ ಯಾವುದೇ ಪ್ರಸ್ತಾವ ಇಲ್ಲ’ ಎಂದು ಅವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದ್ದಾರೆ.
ಇದೇ ವೇಳೆ ಅವರು, ವಿವಿಧ ರೈಲು ಮಾರ್ಗಗಳ ಕಾಮಗಾರಿಯ ಪ್ರಗತಿ ಕುರಿತು ಮಾಹಿತಿಯನ್ನೂ ನೀಡಿದರು.