ನವದೆಹಲಿ: ನ್ಯಾ. ಎ.ವಿ. ಚಂದ್ರಶೇಖರ್ ಸಮಿತಿಯ 13ನೇ ವರದಿಯ ಶಿಫಾರಸಿನಂತೆ ಶಿವರಾಮ ಕಾರಂತ ಬಡಾವಣೆಯ 870 ಕಟ್ಟಡಗಳನ್ನು ಸಕ್ರಮಗೊಳಿಸುವಂತೆ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ(ಬಿಡಿಎ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ಅಬ್ದುಲ್ ನಜೀರ್ ಹಾಗೂ ಸಂಜೀವ್ ಖನ್ನಾ ಅವರಿದ್ದ ಪೀಠವು, 4 ವಾರಗಳ ಒಳಗಾಗಿ ಸಮಿತಿಯ ಮೇಲ್ವಿಚಾರಣೆಯಡಿ ಪಾರದರ್ಶಕವಾಗಿ ಅರ್ಜಿದಾರರಿಗೆ ಸಕ್ರಮದ ಪ್ರಮಾಣ ಪತ್ರಗಳನ್ನು ನೀಡಬೇಕು ಎಂದು ಬಿಡಿಎ ಆಯುಕ್ತರಿಗೆ ಸೂಚಿಸಿದೆ.ಅಲ್ಲದೆ, ಸಮಿತಿಯೊಂದಿಗೆ ಚರ್ಚೆ ನಡೆಸಿದ ಬಳಿಕ ನಿರ್ಮಾಣದ ಸ್ವರೂಪಕ್ಕೆ ಸಂಬಂಧಿಸಿ 2 ವಾರಗಳಲ್ಲಿ ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರದ ವಸತಿ ಇಲಾಖೆಗೂ ಸೂಚಿಸಲಾಗಿದೆ.
ಶ್ರೀ ರೇಣುಕಾ ಆದಿಪರಾಶಕ್ತಿ ದೇವಸ್ಥಾನಕ್ಕೆ ಸೇರಿದ ಏಳು ದೇವಾಲಯಗಳು, ಯೋಗ ಶಾಲೆ, ಅಡುಗೆ ಕೋಣೆ, ಭೋಜನಶಾಲೆ ಹಾಗೂ ವಸತಿ ಇತ್ಯಾದಿಗಳ ಕಟ್ಟಡಗಳಿಗೆ ಸಂಬಂಧಿಸಿ ಮಾಡಿದ್ದ ಸ್ವಾಧೀನ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ.