ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಬಿಜೆಪಿಯಲ್ಲಿ ಮುರ್ಮು, ಆರಿಫ್ ಖಾನ್ ಹೆಸರುಗಳ ಚರ್ಚೆ?

Last Updated 16 ಜೂನ್ 2022, 16:30 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿ ಆಯ್ಕೆಯ ಸಂಬಂಧ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಪಾಳಯದಲ್ಲಿ ಗಹನ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಬಿಜೆಪಿಯಿಂದ ಎರಡು ಹೆಸರುಗಳು ಸದ್ಯ ಮುನ್ನೆಲೆಗೆ ಬಂದಿವೆ.

ಆಂತರಿಕ ರಾಜಕೀಯ ಮತ್ತು ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರ ಹಾಕುತ್ತಿದೆ. ಜಾರ್ಖಂಡ್‌ನ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಮತ್ತು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಹೆಸರುಗಳು ಬಿಜೆಪಿ ಅಂಗಳದಲ್ಲಿ ಚರ್ಚೆಯಲ್ಲಿವೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿ ಸಂಸ್ಥೆ ಐಎಎನ್‌ಎಸ್‌ ವರದಿ ಪ್ರಕಟಿಸಿದೆ.

ಎನ್‌ಡಿಎ ಪಕ್ಷಗಳೊಂದಿಗೆ ಸೂಕ್ತ ಸಮಾಲೋಚನೆ ನಡೆಸಿದ ನಂತರ ಬಿಜೆಪಿ ಸಂಸದೀಯ ಮಂಡಳಿಯು ಮುಂದಿನ ವಾರ ಅಭ್ಯರ್ಥಿಯ ಆಯ್ಕೆ ಸಂಬಂಧ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

ಮುಂಬರುವ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡರೆ, ಬುಡಕಟ್ಟು ಜನಾಂಗದವರು ಬಿಜೆಪಿಯ ಕಡೆಯಿಂದ ರಾಷ್ಟ್ರಪತಿ ಅಭ್ಯರ್ಥಿಯಾಬಹುದು. ಗುಜರಾತ್, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಬುಡಕಟ್ಟು ಮತಗಳು ನಿರ್ಣಾಯಕ ಎನಿಸಿವೆ. ಅದೂ ಅಲ್ಲದೇ, ದೇಶದಲ್ಲಿ ಈ ವರೆಗೆ ಬುಡಕಟ್ಟು ಸಮುದಾಯದ ಯಾರೊಬ್ಬರೂ ರಾಷ್ಟ್ರಪತಿಗಳಾಗಿಲ್ಲ. ಹೀಗಾಗಿ ಬುಡಕಟ್ಟು ಸಮುದಾಯದವರನ್ನು, ಅದರಲ್ಲೂ ಮಹಿಳೆಯೊಬ್ಬರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಅದರ ಶ್ರೇಯವನ್ನು ತನ್ನದಾಗಿಸಿಕೊಳ್ಳುವತ್ತ ಬಿಜೆಪಿ ಚಿಂತನೆ ನಡೆಸಿದೆ. ಅದಕ್ಕೆ ಮುರ್ಮು ಉತ್ತಮ ಆಯ್ಕೆಯಾಗಬಲ್ಲರು ಎಂಬ ಅಂದಾಜು ಇದೆ ಎನ್ನಲಾಗಿದೆ.

ಇನ್ನೊಂದೆಡೆ, ಅಂತರರಾಷ್ಟ್ರೀಯ ರಾಜತಾಂತ್ರಿಕತೆಯನ್ನು ಗಮನದಲ್ಲಿಟ್ಟುಕೊಂಡು ಕೇರಳದ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಆಯ್ಕೆಯೂ ಬಿಜೆಪಿ ಮುಂದಿದೆ ಎನ್ನಲಾಗಿದೆ. ಈ ಮೂಲಕ ಸರ್ಕಾರದ ಅಂತರರಾಷ್ಟ್ರೀಯ ಇಮೇಜ್‌ ಹೆಚ್ಚಿಸಿಕೊಳ್ಳುವತ್ತಲೂ ಬಿಜೆಪಿ ಲಕ್ಷ್ಯವಿರಿಸಿದೆ. ಪ್ರವಾದಿ ಮಹಮ್ಮದರ ಅವಹೇಳನ ವಿವಾದವು ಇತ್ತೀಚೆಗೆ ಸರ್ಕಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಆರಿಫ್‌ ಮೊಹಮದ್‌ ಖಾನ್‌ ಅವರ ಹೆಸರನ್ನೂ ಪರಿಗಣಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ವಿಷಯಗಳಲ್ಲಿ ಖಾನ್‌ ಬಿಜೆಪಿಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರು ಅಲಿಗಡ ಮುಸ್ಲಿಮ್‌ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದವರು. ರಾಜೀವ್ ಗಾಂಧಿ ಸಂಪುಟದಲ್ಲಿ ಕೇಂದ್ರ ಸಚಿವರಾಗಿದ್ದರು. ಜನತಾ ದಳ, ಬಿಎಸ್‌ಪಿಯಲ್ಲಿಯೂ ಇದ್ದ ಖಾನ್‌ 2004ರಲ್ಲಿ ಬಿಜೆಪಿ ಸೇರಿದ್ದರು. 2009ರಲ್ಲಿ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT